ಪುತ್ತೂರು: ಸನಾತನ ಧರ್ಮದ ರಕ್ಷಣೆ ಮಾಡುವವರನ್ನು ಸದಾ ಬೆಂಬಲಿಸಬೇಕು ಮತ್ತು ಈ ಮೂಲಕ ಧರ್ಮ ರಕ್ಷಣೆ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ತಮಿಳುನಾಡಿನ ಕಂಚಿಪುರದ ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ೩ನೇ ದಿನವಾದ ಶನಿವಾರ ನಡೆದ ಧರ್ಮ ಸಂದೇಶ ಕಲಾಪದಲ್ಲಿ ಅವರು ಸಂದೇಶ ನೀಡಿದರು.
ಹಿಂದುವಾಗಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ. ನಮ್ಮಲ್ಲಿ ವ್ಯಕ್ತಿಗತ ವಿನಯ ಇರಬೇಕು. ಸಮಷ್ಟಿ ಚಿಂತನೆಯಲ್ಲಿ ಗರ್ವ ಇರಬೇಕು. ಆಗ ಮಾತ್ರ ಸಮಾಜದಲ್ಲಿ ಧರ್ಮ ರಕ್ಷಣೆ ಮಾಡಲು ಸಾಧ್ಯ. ಶಾಸ್ತ್ರೀಯ ವೈದಿಕ ಕುಟುಂಬದಿಂದ ಬಂದವರು ವೇದಾಧ್ಯಯನ ಮಾಡಬೇಕು. ಒಂದು ಮನೆಯಿಂದ ಒಬ್ಬರಾದರೂ ವೇದಾಧ್ಯಯನ ಮಾಡುವ ಮೂಲಕ ಸನಾತನ ಶ್ರೀಮಂತ ಪರಂಪರೆ ಉಳಿಸಬೇಕು ಎಂದು ಹೇಳಿದ ಶ್ರೀಗಳು, ಹನುಮಗಿರಿ ಕ್ಷೇತ್ರದಲ್ಲಿ ರಾಮ ಮತ್ತು ಹನುಮರ ಸಮ್ಮಿಳಿತ ಶಕ್ತಿಯಿದೆ. ಈ ಕ್ಷೇತ್ರದ ಮೂಲಕ ವಿದ್ಯೆ, ವೈದ್ಯ ಮತ್ತು ಲಘು ಉದ್ಯೋಗ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕು ಎಂದರು.
ರಾಮನಷ್ಟು ಶ್ರೇಷ್ಠರಿಲ್ಲ:
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ತೀರ್ಥ ಸ್ವಾಮೀಜಿ ಸಂದೇಶ ನೀಡಿ, ಶ್ರೀರಾಮನ ವ್ಯಕ್ತಿತ್ವ ಅತ್ಯಂತ್ಯ ಶ್ರೇಷ್ಠವಾದುದು. ಈ ಜಗತ್ತಿನಲ್ಲಿ ಶ್ರೀರಾಮನಷ್ಟು ಶ್ರೇಷ್ಠ ವ್ಯಕ್ತಿತ್ವದ ಮನುಷ್ಯರು ಬೇರೆ ಯಾರೂ ಇದುವರೆಗೆ ಹುಟ್ಟಿಲ್ಲö. ಶಿವನ ಅವತಾರಿಯಾದ ಆಂಜನೇಯ ಹನುಮಗಿರಿಯಲ್ಲಿ ಪಂಚಮುಖಿಯಾಗಿ ನೆಲೆ ನಿಂತಿದ್ದಾನೆ. ಇದು ಪಾವನ ತಾಣ ಎಂದರು.
ರಾಮ ನಾಮ ತಾರಕ ಮಂತ್ರವನ್ನು ೧೩ ಸಾವಿರ ಭಕ್ತರು ದೀಕ್ಷೆ ಮೂಲಕ ಪಠಿಸಿದ್ದಾರೆ ಎಂದರೆ ಇದೊಂದು ಇತಿಹಾಸವೇ ಸರಿ. ರಾಮ ನಾಮದ ಬಲದಿಂದ ಬೇಡನಾಗಿದ್ದ ರತ್ನಾಕರ ವಾಲ್ಮೀಕಿ ಮಹರ್ಷಿಯಾದ. ಸಾಮಾನ್ಯರಾದ ನಾವು ಕೂಡ ರಾಮ ನಾಮ ಸ್ಮರಣೆಯಿಂದ ಶ್ರೇಷ್ಠರಾಗಲು ಸಾಧ್ಯ. ಪ್ರತಿಯೊಬ್ಬರೂ ಸಾತ್ವಿಕ ಜನರಾಗಿ ಬದಲಾದಾಗ ಇಡೀ ಜಗತ್ತೇ ಧರ್ಮ ಸಾಮ್ರಾಜ್ಯವಾಗಿ ಬೆಳಗುತ್ತದೆ ಎಂದರು.
ಭರತ ಭೂಮಿಗೆ ತೇಜಸ್ಸು:
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಇಂಥ ಕಾರ್ಯಕ್ರಮಗಳು ಹಿಂದೂ ಸಮಾಜದ ಕಲ್ಯಾಣಕ್ಕೆ ಪೂರಕ. ಆಚಾರ್ಯರು ಲೋಕ ಕಲ್ಯಾಣಕ್ಕಾಗಿ ಚಿಂತಿಸುತ್ತಾರೆ. ತಪಸ್ವಿಗಳ ನೈಪುಣ್ಯದಿಂದಾಗಿ ಭರತ ಭೂಮಿ ತೇಜಸ್ಸು ಬಂದಿದೆ ಎಂದರು. ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ, ನಹುಷ, ಪದಾಕಾರಿಗಳಾದ ಸೀತಾರಾಮ ರೈ ಕೆದಂಬಾಡಿ ಗುತ್ತು, ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೊಟ್ಟು, ಮುರಳಿಕೃಷ್ಣ ಹಸಂತಡ್ಕ, ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಳದಂಗಡಿ ತಿಮ್ಮಣ್ಣರಸರಾದ ಪದ್ಮಪ್ರಸಾದ್ ಅಜಿಲ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರ್ವಹಿಸಿದರು.
ಹನುಮಗಿರಿ ಕ್ಷೇತ್ರದಲ್ಲಿ ಶ್ರೀರಾಮ ತಾರಕ ಯಾಗ ಸಂಪನ್ನ
ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖ ಆಂಜನೇಯ ಕ್ಷೇತ್ರದಲ್ಲಿ ಶನಿವಾರ ಶ್ರೀರಾಮ ತಾರಕ ಮಹಾಯಾಗ ಸಂಪನ್ನಗೊಂಡಿತು.
ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ, ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಯಾಗದ ಪೂರ್ಣಾಹುತಿ ನಡೆಯಿತು.
ಶುಕ್ರವಾರ ಯಾಗ ಮಂಟಪದಲ್ಲಿ ಅಷ್ಟೋತ್ತರ ಶತ ನಾಳಿಕೇರ ಗಣಹೋಮ ನಡೆದ ಬಳಿಕ 100 ವೈದಿಕರಿಂದ ಜಪ ಪಠಣ ಆರಂಭಗೊಂಡಿತ್ತು. ಇದಕ್ಕೂ ಮೊದಲು ಕಳೆದ ಒಂದು ತಿಂಗಳಿನಿAದ ಜಪ ದೀಕ್ಷೆ ಪಡೆದ ಸುಮಾರು ೧೩ ಸಾವಿರ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಶ್ರೀ ರಾಮ ತಾರಕ ಮಂತ್ರದ ಪಠಣ ಮಾಡಿದ್ದರು. ಒಂದು ಕೋಟಿ ಶ್ರೀರಾಮ ನಾಮ ತಾರಕ ಮಂತ್ರ ಪಠಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದುö, ಅದು ಪೂರ್ಣಗೊಂಡ ಬಳಿಕ ಶನಿವಾರ ಶ್ರೀರಾಮ ತಾರಕ ಯಾಗ ನಡೆಸಲಾಯಿತು. ಪ್ರಾರ್ಥನೆ, ಪುಣ್ಯಾಹ ನಡೆದ ಮೇಲೆ ಅರಣಿ ಮಥನದ ಮೂಲಕ ಅಗ್ನಿ ಸೃಜಿಸಿ ಅದರಂದ ಪ್ರಧಾನ ಕುಂಡದಲ್ಲಿ ಅಗ್ನಿ ಸ್ಥಾಪನೆ ಮಾಡಲಾಯಿತು. ಬಳಿಕ 110 ವೈದಿಕರು ಯಾಗ ನಡೆಸಿಕೊಟ್ಟರು. 10 ಕುಂಡಗಳಲ್ಲಿ ಹೋಮ ನಡೆದು, ಪ್ರಧಾನ ಕುಂಡದಲ್ಲಿ ಪೂರ್ಣಾಹುತಿ ನಡೆಯಿತು. ಬೆಳಗ್ಗೆ 7 ಗಂಟೆಗೆ ಆರಂಭಗೊAಡ ಯಾಗ 11 ಗಂಟೆಗೆ ಪೂರ್ಣಗೊಂಡಿದ್ದು, 12 ಗಂಟೆಗೆ ಪೂರ್ಣಾಹುತಿ ನೀಡಲಾಯಿತು.




























