ಪುತ್ತೂರು: ಕುಂಬ್ರ- ಪರ್ಪುಂಜದಲ್ಲಿರುವ ಎಬ್ರಾಡ್ ಮದಕಂ ಮತ್ತು ಶಿವಕೃಪಾ ಸಭಾ ಭವನದ ಮಾಲಿಕರ ವಿರುದ್ದ ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಡಿ.26ರಂದು ಈ ಎರಡೂ ಎಬ್ರಾಡ್ ಮದಕಂ ಮತ್ತು ಶಿವಕೃಪಾ ಸಭಾ ಭವನದಲ್ಲಿ ಕಾರ್ಯಕ್ರಮ ನಡೆದಿದ್ದು , ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರು ತಮ್ಮ ವಾಹನಗಳನ್ನು ಮಾಣಿ- ಮೈಸೂರು ರಾ. ಹೆದ್ದಾರಿಯ ಬದಿಗಳಲ್ಲಿ ನಿಲ್ಲಿಸಿ ಕಾರ್ಯಕ್ರಮಕ್ಕೆ ತೆರಳಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನದ ಕಾರಣದಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿರುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ಅಪಾಯ ಉಂಟಾಗುವ ಸಾಧ್ಯತೆಯನ್ನು ಪರಿಗಣಿಸಿ ಮಾಲಿಕರ ವಿರುದ್ದ ಪ್ರಕರಣ ದಾಖಲಾಗಿದೆ.
ಎರಡೂ ಸಭಾಭವನದ ಮಾಲಿಕರು ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್ ಗೆ ಸೂಕ್ತ ವ್ಯವಸ್ಥೆಯನ್ನು ಮಾಡದೆ, ವಾಹನ ನಿಲುಗಡೆಗೆ ಯಾವುದೇ ಸಿಬಂದಿಯನ್ನೂ ನೇಮಿಸದೆ ನಿರ್ಲಕ್ಷ್ಯ ವಹಿಸಿದ್ದ ವಿರುದ್ದ ಎರಡೂ ಸಭಾಭವನದ ಮಾಲಿಕರ ವಿರುದ್ದ ಐಪಿಸಿ ಸೆಕ್ಷನ್ 283 ರ ಜೊತೆಗೆ 34 ರ ಸೆಕ್ಷನ್ನಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.