ಪುತ್ತೂರು: ಕಳೆದ ಡಿ.14 ರಂದು ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ವಿಚಾರಣೆಗಾಗಿ ಪಿಎಫ್ಐ ಮುಖಂಡರನ್ನು ಕರೆದುಕೊಂಡು ಬಂದು, ಬಿಡುಗಡೆ ಮಾಡದ ಸಂದರ್ಭದಲ್ಲಿ, ಪಿಎಫ್ಐ/ ಎಸ್ಡಿಪಿಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಮುಂಭಾಗ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ, ಪೊಲೀಸ್ ಠಾಣಾ ಕರ್ತವ್ಯದಲ್ಲಿದ್ದ ಪೊಲೀಸ್ ಉಪ ನಿರೀಕ್ಷಕಿ ಹಾಗೂ ಸಿಬ್ಬಂದಿಗಳ ಮೇಲೆ, ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದ ಬಗ್ಗೆ ಆರೋಪಿಸಿ, 10 ಮಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ತದನಂತರ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು.
ಈ ಪ್ರಕರಣದಲ್ಲಿ ಐದನೇ ಆರೋಪಿ ಮೊಹಮ್ಮದ್ ಜಾಹಿದ್ ಪರ ಪುತ್ತೂರಿನ ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹಾಜರಾಗಿ, ಬಿಡುಗಡೆಗಾಗಿ ಜಾಮೀನು ಅರ್ಜಿಯನ್ನು ಸಲ್ಲಿಸಿ, ವಾದವನ್ನು ಮಂಡಿಸಿದ್ದರು. ವಾದ ವಿವಾದವನ್ನು ಆಲಿಸಿದ, ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ, ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಆದೇಶಿಸಿದೆ.