ಪುತ್ತೂರು: ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಆದೇಶವನ್ನು ಮರುಪರಿಶೀಲಿಸಿ ಹಿಂಪಡೆಯುವಂತೆ ಆಗ್ರಹಿಸಿ ಪುತ್ತೂರು ಯುವ ಕಾಂಗ್ರೆಸ್ ವತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಸಹಾಯಕ ಕಮೀಷನರ್ ರವರಿಗೆ ಜ.17 ರಂದು ಮನವಿ ಸಲ್ಲಿಸಲಾಯಿತು.
ಸರಕಾರ ಪ್ರತಿ ಸಂದರ್ಭದಲ್ಲಿ ತಜ್ಞರ ವರದಿಯಂತೆ ವೀಕೆಂಡ್ ಮತ್ತು ನೈಟ್ ಕರ್ಫ್ಯೂ ಹಾಕುತ್ತಿದ್ದೇವೆ ಎಂದು ಹೇಳುತ್ತದೆ. ಆದರೆ ಈ ಸಂದರ್ಭದಲ್ಲಿ ಜನಸಾಮಾನ್ಯರ ಮೇಲೆ ಆಗುವ ನೋವು, ನಷ್ಟಗಳ ಹೊಣೆಯನ್ನು ಹೊರುವವರು ಯಾರು ಎಂದು ನಗರ ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಅಧ್ಯಕ್ಷ ಶ್ರೀಪ್ರಸಾದ್ ರವರು ಸರಕಾರವನ್ನು ಪ್ರಶ್ನಿಸಿದರು.
ಕರ್ಫ್ಯೂ ಆದೇಶ ಹೊರಡಿಸುವ ಸರಕಾರ ಜನಸಾಮಾನ್ಯರ ಕಷ್ಟ ನೋವುಗಳ ಹೊಣೆಯನ್ನು ಹೊರಬೇಕು. ಯಾಕೆಂದರೆ ಅನೇಕ ಮಂದಿ ಸ್ವಾವಲಂಭಿ ಬದುಕಿಗಾಗಿ ಬ್ಯಾಂಕ್ ಸಾಲ ಮಾಡಿ ಕೆಲಸ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಲೈಟಿಂಗ್ಸ್, ಶಾಮಿಯಾನ, ವಿವಿಧ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡವರು, ದೈವ ನರ್ತಕರು, ಚೆಂಡೆ ವಾದ್ಯ ನುಡಿಸುವವರು, ಅಡುಗೆಯವರು ಮನೆಯಲ್ಲೇ ಕೂರುವ ಪರಿಸ್ಥಿತಿ ಉಂಟಾಗಿದೆ. ಜಾತ್ರೆಗಳಲ್ಲಿ ಸಂತೆ ಇನ್ನಿತರ ವಸ್ತುಗಳ ಮಾರಾಟದಲ್ಲಿ ಬರುವ ಆದಾಯವನ್ನು ನಂಬಿಕೊಂಡವರು ಬೀದಿ ಪಾಲಾಗಿದ್ದಾರೆ. ಕಲಾವಿದರ ಬದುಕು ಕೇಳುವವರಿಲ್ಲ. ಕಳೆದೆರಡು ಲಾಕ್ಡೌನ್ ಸಂದರ್ಭದಲ್ಲಿ ಬಸ್, ಆಟೋ, ಟ್ಯಾಕ್ಸಿ ಚಾಲಕರು, ನಿರ್ವಾಹಕರು, ಗ್ಯಾರೇಜು ಮಾಲಕರು, ನಿರ್ವಾಹಕರು, ಆದಾಯದ ವಿಲ್ಲದೆ ಬ್ಯಾಂಕ್ ಸಾಲ ಕಟ್ಟಲಾಗದೆ ಕಣ್ಣೀರು ಸುರಿಸುತ್ತಿದ್ದಾರೆ. ಶಾಲೆ ಕಾಲೇಜು ಮುಚ್ಚುವುದರಿಂದ ಇಡೀ ಒಂದು ವರ್ಗದ ಮಕ್ಕಳಲ್ಲಿ ಅನಕ್ಷರತೆಯ ಭಯ ಕಾಡುತ್ತಿದೆ. ಅತಿಥಿ ಶಿಕ್ಷಕರು, ಖಾಸಗಿ ಶಾಲಾ ಶಿಕ್ಷಕರು ಬೇರೆ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಹೊಟೇಲು ಉದ್ಯಮಗಳು ಮುಚ್ಚುತ್ತಿವೆ. ಎಲ್ಲಾ ಧರ್ಮದ ಧಾರ್ಮಿಕ ಭಾವನೆಗೆ ಬಲವಾದ ಪೆಟ್ಟು ಬೀಳುತ್ತಿದೆ. ಬಟ್ಟೆ ಅಂಗಡಿ, ಫ್ಯಾನ್ಸಿ ಅಂಗಡಿ, ಚಪ್ಪಲಿ ಅಂಗಡಿ ಮತ್ತು ಇನ್ನಿತರ ಬಾಡಿಗೆ ನೀಡುತ್ತಿರುವ ವರ್ತಕರು ನಷ್ಟದಲ್ಲಿದ್ದಾರೆ.
ಬಾಡಿಗೆ ಮನೆಯಲ್ಲಿ ಇರುವಂತಹ ಕುಟುಂಬಗಳ ಮೇಲೆ ಬಾಡಿಗೆಯಲ್ಲಿ ಯಾವುದೇ ವಿನಾಯಿತಿ ಇಲ್ಲದೆ ಸಾಲ ಬಾಧೆಯಿಂದ ಬಳಲುತ್ತಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಬಡವ, ಮಧ್ಯಮ ವರ್ಗದ ಜನರ ಬದುಕು ಮತ್ತಷ್ಟು ಭೀಕರವಾಗಿ ಪರಿಣಮಿಸಲಿದೆ. ಈ ನಿಟ್ಟಿನಲ್ಲಿ ಸರಕಾರ ತಕ್ಷಣ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಜನರಿಗೆ ಬೇಕಾದ ಕೊರೋನಾ ಹಿಮ್ಮೆಟ್ಟಿಸುವ ಸಲುವಾಗಿ ವೈದ್ಯಕೀಯ ಸೌಲಭ್ಯವನ್ನು ಕ್ಲಪ್ತ ಸಮಯದಲ್ಲಿ ಒದಗಿಸಲು ಕಾರ್ಯಪ್ರವೃತರಾಗಬೇಕೆಂದರು.
ಈ ಸಂದರ್ಭದಲ್ಲಿ ಪುತ್ತೂರು ನಗರ ಯುವಕಾಂಗ್ರೆಸ್ಅಧ್ಯಕ್ಷರಾದ ಮೋನು ಬಪ್ಪಳಿಗೆ, ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ಉಪಾಧ್ಯಕ್ಷರಾದ ಹನೀಫ್ ಪುಂಚತ್ತಾರ್, ಸುಮಿತ್ರ ಪುರುಷರಕಟ್ಟೆ, ಪ್ರ.ಕಾರ್ಯದರ್ಶಿಗಳಾದ ಕಮಲೇಶ್ ಸರ್ವೇದೋಳಗುತ್ತು, ರಶೀದ್ ಮುರ, ರವೂಫ್ ಸಾಲ್ಮರ, ಅಭಿಷೇಕ್ ಆಚಾರ್ಯ, ಶಮೀಮ್ ಗಾಳಿಮುಖ, ಶ್ರೀಮತಿ ರೇಖಾ ಸಾಲ್ಮರ ನಗರ ಯುವಕಾಂಗ್ರೆಸ್ ಉಪಾಧ್ಯಕ್ಷರಾದ ಅಖಿಲ್ ಸಾಮೆತ್ತಡ್ಕ, ಪ್ರ.ಕಾರ್ಯದರ್ಶಿಯಾದ ತವೀದ್ ಸಾಲ್ಮರ ಹಾಗೂ ಯುವನಾಯಕರಾದ ಜಗದೀಶ್ ಕಜೆ, ಸಾದಿಕ್ ನೀರಕಟ್ಟೆ, ಸದಾನಂದ ಭರಣ್ಯ, ಜಲೀಲ್ ಬಲ್ನಾಡ್, ಕಾಂತಿ ಪ್ರಕಾಶ್ ಡಿ. ಸೋಝ , ಎಂ.ಎ ಅಬ್ದುಲ್ ಕುಂಞ, ಸುನೈಫ್ ಗಾಳಿಮುಖ ಮತ್ತಿತರರು ಉಪಸ್ಥಿತರಿದ್ದರು.