ಬಂಟ್ವಾಳ: ಚುನಾವಣೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ ರವರು 2021-22ನೇ ಸಾಲಿನ ರಾಜ್ಯಮಟ್ಟದ ಎಕ್ಸಲೆನ್ಸ್ ಅವಾರ್ಡ್ ಗೆ ಭಾಜನರಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಸಹಾಯಕ ಚುನಾವಣಾ ನೋಂದಣಾಧಿಕಾರಿಯಾಗಿ ಇವರು ನಿರ್ವಹಿಸಿದ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಕಳೆದ 2011 ರಿಂದ ರಾಷ್ಟ್ರೀಯ ಮತದಾರರ ದಿನದಂದು ಈ ಪ್ರಶಸ್ತಿಯನ್ನು ರಾಜ್ಯಪಾಲರ ಉಪಸ್ಥಿತಿಯಲ್ಲಿ ಚುನಾವಣೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಪಾಲರ ಕಾರ್ಯದರ್ಶಿಯವರು ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ.
ಮಂಗಳೂರಿನ ಜಿಲ್ಲಾಪಂಚಾಯತ್ ಸಭಾಂಗಣದಿಂದ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಸಹಿತ ಹಲವು ಅಧಿಕಾರಿಗಳು ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ರ ಸಹಿಯುಳ್ಳ ಪ್ರಶಸ್ತಿಯ ಪ್ರಮಾಣಪತ್ರ ವನ್ನು ತಹಶೀಲ್ದಾರ್ ರಶ್ಮೀ ಎಸ್.ಆರ್ ರವರಿಗೆ ನೀಡಿ ಗೌರವಿಸಲಾಯಿತು.