ಮಂಗಳೂರು: ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಯಾಸ್ ಝಿಯಾನ್ ಎಂಬಾತ ಮಾ.1ರಿಂದ 6ರವರೆಗೆ ನೋಂದಣಿ ಸಂಖ್ಯೆ ಇಲ್ಲದ ಬೈಕ್ನಲ್ಲಿ ಇಬ್ಬರನ್ನು ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಓವರ್ ಬ್ರಿಡ್ಜ್ನಿಂದ ಉಳ್ಳಾಲಬೈಲ್ವರೆಗೆ ಹಾಗೂ ನಾಗುರಿಯಿಂದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯವರೆಗೆ ವ್ಹೀಲಿಂಗ್ ಸ್ಟಂಟ್ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಇತರ ವಾಹನಗಳು, ಪಾದಚಾರಿಗಳಿಗೆ ಅಪಾಯ ಉಂಟಾಗುವ ರೀತಿಯಲ್ಲಿ ಸವಾರಿ ಮಾಡುತ್ತಿದ್ದ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.
ಈ ಕುರಿತಾದ ವೀಡಿಯೋವನ್ನು ಮಾ.10ರಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಸದ್ಯ ಪೊಲೀಸರು ಇಲ್ಯಾಸ್, ಬೈಕ್ ಮಾಲಕ ಮತ್ತು ವ್ಹೀಲಿಂಗ್ ಸ್ಟಂಟ್ನ್ನು ವೀಡಿಯೊ ಮಾಡಿದ್ದ ಸಫ್ವಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರ ಹೊರವಲಯದ ಅಡ್ಯಾರ್ ಸಮೀಪ ಮಾ.10ರಂದು ಬೈಕ್ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪದ ಮೇರೆಗೆ ಕಿಶನ್ ಶೆಟ್ಟಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ವೀಡಿಯೋ ಕೂಡ ವೈರಲ್ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು.
ಉಳ್ಳಾಲದಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತಿದ್ದ ತೌಸೀಫ್ ವಿರುದ್ಧ ಹಾಗೂ ವಾಮಂಜೂರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆನೀಝ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.