ಬಂಟ್ವಾಳ: ವರ್ಕ್ ಶಾಪ್ ನಲ್ಲಿರಿಸಿ ಹೋಗಿದ್ದ ಪಿಕಪ್ ವಾಹನ ಮತ್ತು ವೆಲ್ಡಿಂಗ್ ಮಿಷನ್ ಹಾಗೂ ಕೆಲ ವಸ್ತುಗಳನ್ನು ಖದೀಮರು ಕಳವುಗೈದಿರುವ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಟೂರು ಗ್ರಾಮದ ರಾಯಪ್ಪ ಕೊಡಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ಮಿಂಜ ನವೋದಯ ನಗರ ನಿವಾಸಿ ಲತೀಶ್ ಜೋಗಿ, ಕಾಸರಗೋಡು ಏನ್ಮಕಜೆ ನಿವಾಸಿ ವಿಶ್ವನಾಥ್, ಕಾಸರಗೋಡು ಮಿಂಜ ನವೋದಯ ನಗರ ನಿವಾಸಿ ರವಿಕಿರಣ್ ಎನ್ನಲಾಗಿದೆ.
ಕಲ್ಲಡ್ಕದ ಅಪೋಲೋ ಎಲೆಕ್ಟ್ರಿಕಲ್ಸ್ ಸಂಸ್ಥೆಯ ವರ್ಕ್ ಶಾಪ್ ಅಮ್ಟೂರು ಗ್ರಾಮದ ರಾಯಪ್ಪ ಕೋಟೆಯಲ್ಲಿದ್ದು, ಏಪ್ರಿಲ್ 5 ರಂದು ಮ್ಯಾನೇಜರ್ ವರ್ಕ್ ಶಾಪ್ ನಲ್ಲಿ ಕೆಲಸ ಮುಗಿದ ಬಳಿಕ ಸಂಜೆ ಅಂಗಳದಲ್ಲಿ ಮಹೇಂದ್ರ ಪಿಕಪ್ ನಿಲ್ಲಿಸಿ ವರ್ಕ್ ಶಾಪ್ ಬೀಗ ಹಾಕಿ, ಬೀಗವನ್ನು ಅಲ್ಲಿಯೇ ಪಕ್ಕದಲ್ಲಿಟ್ಟು ಹೋಗಿದ್ದು, ಏಪ್ರಿಲ್ 6ರಂದು ಬೆಳಗ್ಗೆ ಮ್ಯಾನೇಜರ್ ವರ್ಕ್ಶಾಪ್ ತೆರೆಯಲು ಹೋದ ಸಮಯ ಗೇಟಿನ ಬೀಗ ತೆಗೆದಿದ್ದು, ಹೊರಗಡೆ ಹೋದಾಗ ನಿಲ್ಲಿಸಿದ್ದ ಜಾಗದಲ್ಲಿ ಪಿಕಪ್ ನಾಪತ್ತೆಯಾಗಿತ್ತು.
ನಿಲ್ಲಿಸಿದ್ದ ಪಿಕಪ್ ವಾಹನ ಮತ್ತು ವೆಲ್ಡಿಂಗ್ ಮಿಷನ್ ಅನ್ನು ಕಳವುಗೈದಿದ್ದು, ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಕಳವಾಗಿದ್ದ ಪಿಕಪ್ ವಾಹನದ ಮೌಲ್ಯ ರೂ. 230000/-, ವೆಲ್ಡಿಂಗ್ ಮಿಷನ್ ಮೌಲ್ಯ ರೂ. 5000/-, ಒಂದು ಕಂಪ್ಯೂಟರ್ ಮಾನಿಟರ್ ಮೌಲ್ಯ ರೂ. 1500/- ಕಂಪ್ಯೂಟರ್ ಮೌಸ್ ಮೌಲ್ಯ ರೂ 150/-ಡಿವಿಆರ್ ಮೌಲ್ಯ ರೂ 5000/-, ನಗದು ಹಣ ರೂ. 7020/- ಕಳ್ಳತನ ಮಾಡಿದ ಸ್ವತ್ತಿನ ಒಟ್ಟು ಮೌಲ್ಯ ರೂ 248670/- ಹಾಗೂ ಕಳ್ಳತನಕ್ಕೆ ಬಳಕೆ ಮಾಡಿದ ಕೆಎಲ್ 14 ಜೆ 5505 ಮೋಟರ್ ಸೈಕಲ್ ಅಂದಾಜು ಮೌಲ್ಯ ರೂ 35000/-ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹೃಷಿಕೇಶ್ ಭಗವಾನ್ ಸೋನಾವಣೆ ಮತ್ತು ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ರವರ ಮಾರ್ಗದರ್ಶನದಂತೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ಥೋರಾಟ್ ರವರ ನಿರ್ದೇಶನದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ರವರ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರರಾದ ಅವಿನಾಶ್ ಮತ್ತು ಕಲೈಮಾರ್ ಹಾಗೂ ಸಿಬ್ಬಂದಿಗಳಾದ ನಾರಾಯಣ, ಇರ್ಷಾದ್, ಮನೋಹರ್, ಗಣೇಶ್, ರಾಘವೇಂದ್ರ, ನಾಗರಾಜ್, ಮೋಹನ್ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ್ ರವರನ್ನ ಒಳಗೊಂಡ ಎರಡು ತಂಡ ಪಾಲ್ಗೊಂಡಿದ್ದರು.


























