ಮಂಗಳೂರು: ಸ್ಕೂಟರ್ ಡಿವೈಡರ್ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಕುಡುಪು ಕಟ್ಟೆಯ ಧೀರಜ್(25) ಅವರು ಮಂಗಳವಾರ ಮೃತಪಟ್ಟಿದ್ದು, ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡ ಕಾರಣ ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು. ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸುವಾಗ ವಿಳಂಬವಾದ ಹಿನ್ನೆಲೆಯಲ್ಲಿ ಅವರ ಅಂಗಾಂಗ ದಾನವೂ ವಿಫಲವಾಗಿದೆ.
ಧೀರಜ್ ಅವರ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಸೋಮವಾರ ರಾತ್ರಿ ಎಜೆ ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು. ಹಾಗಾಗಿ ಅಂಗಾಂಗ ದಾನ ಮಾಡಲು ಮನೆಯವರು ನಿರ್ಧರಿಸಿದ್ದರು. ಅದರಂತೆ ಅಂಗಾಂಗಗಳನ್ನು ಪಡೆಯಲು ಚೆನ್ನೈನಿಂದ ತಜ್ಞರ ತಂಡ ಚಾರ್ಟರ್ ವಿಮಾನದಲ್ಲಿ ಆಗಮಿಸಿತ್ತು. ಆದರೆ ಬೆಂಗಳೂರಿನಿಂದ ತಜ್ಞರ ತಂಡ ಬರುವಾಗ ವಿಳಂಬವಾಯಿತು. ಆ ವೇಳೆ ಧೀರಜ್ ಅವರು ಕೊನೆಯುಸಿರೆಳೆದಿದ್ದರು. ಹಾಗಾಗಿ ಅಂಗಾಂಗ ದಾನ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ರವಿವಾರ ಮುಂಜಾನೆ ಸುಮಾರು 2.15ಕ್ಕೆ ಧೀರಜ್ ಅವರು ತನ್ನ ಸ್ನೇಹಿತ ಗಣೇಶ್ ಅವರೊಂದಿಗೆ ಸ್ಕೂಟರ್ನಲ್ಲಿ ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ನಂತೂರು ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 73ಲ್ಲಿ ಹೋಗುತ್ತಿದ್ದಾಗ ಬಿಕರ್ನಕಟ್ಟೆಯ ಉಸ್ಮಾನಿಯಾ ಕಾಂಪ್ಲೆಕ್ಸ್ ಮುಂಭಾಗ ನಿಯಂತ್ರಣ ತಪ್ಪಿ ಸ್ಕೂಟರ್ ಡಿವೈಡರ್ಗೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಇಬ್ಬರೂ ಗಂಭೀರ ಗಾಯಗೊಂಡು ರಸ್ತೆಗೆ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.


























