ಪುತ್ತೂರು: ತರಗತಿ ಆರಂಭವಾಗಿ ಒಂದು ತಿಂಗಳು ಕಳೆದರು ಸಮಾಜಶಾಸ್ತ್ರ ಉಪನ್ಯಾಸಕರನ್ನು ನೇಮಿಸಿಲ್ಲ ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಶೀಘ್ರವಾಗಿ ಉಪನ್ಯಾಸಕರನ್ನು ನೇಮಿಸುವಂತೆ ಆಗ್ರಹಿಸಿ ಸ.ಪ್ರ.ದ.ಕಾಲೇಜು ಜಿಡೆಕಲ್ಲು ಇಲ್ಲಿನ ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.

ಕಳೆದ ಸೆಮಿಸ್ಟರ್ ಪರೀಕ್ಷೆಗಳು ಮುಗಿದು, ಇನ್ನೊಂದು ಸೆಮಿಸ್ಟರ್ ತರಗತಿಗಳು ಆರಂಭವಾಗಿ ಒಂದು ತಿಂಗಳು ಆಗುತ್ತಾ ಬಂದಿದ್ದು, ಆದರೇ ಕಾಲೇಜಿನ ಬಿ.ಎ. ತರಗತಿಗಳಿಗೆ ಸಮಾಜಶಾಸ್ತ್ರ ಉಪನ್ಯಾಸಕರನ್ನು ಇನ್ನೂ ನೇಮಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಾದ ನಮಗೆ ಬಹಳಷ್ಟು ಕಷ್ಟವಾಗುತ್ತಿದೆ.
ಕಳೆದ ಸೆಮಿಸ್ಟರ್ ನಲ್ಲಿ ಪ್ರಥಮ ಬಿ.ಎ. ವಿದ್ಯಾರ್ಥಿಗಳು ‘Accounting for everyone’ ವಿಷಯದ ಉಪನ್ಯಾಸಕರಿಲ್ಲದೆ ಪರದಾಡಿದ್ದಾರೆ. ಆ ವಿಷಯದಲ್ಲಿ ಅನುತ್ತೀರ್ಣರಾಗುವ ಭಯದಲ್ಲೂ ಇದ್ದಾರೆ. ಹಾಗೆಯೇ ಈ ಸೆಮಿಸ್ಟರ್ ನಲ್ಲಿ ಬಿ.ಎ. ಯ ಮೂರು ವರ್ಷದ ವಿದ್ಯಾರ್ಥಿಗಳು ಸಮಾಜಶಾಸ್ತ್ರ ಉಪನ್ಯಾಸಕರಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.

ಕಳೆದ ಸೆಮಿಸ್ಟರ್ ನಲ್ಲಿ ಆದ ತಪ್ಪು, ಈ ಸೆಮಿಸ್ಟರ್ ನಲ್ಲೂ ಆಗುವುದು ನಮಗೆ ಇಷ್ಟವಿಲ್ಲ. ಶೀಘ್ರವಾಗಿ ಸಮಾಜಶಾಸ್ತ್ರ ಉಪನ್ಯಾಸಕರ ವ್ಯವಸ್ಥೆ ಮಾಡಬೇಕು. ಮುಂದಿನ 10 ದಿನದೊಳಗೆ ಉಪನ್ಯಾಸಕರ ವ್ಯವಸ್ಥೆ ಆಗದಿದ್ದಲ್ಲಿ ವಿದ್ಯಾರ್ಥಿಗಳು ಮುಂದಿನ ದಾರಿ ಬಗ್ಗೆ ಯೋಚಿಸುತ್ತೇವೆ. ಶೀಘ್ರವಾಗಿ ಉಪನ್ಯಾಸಕರನ್ನು ನೇಮಿಸಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

























