ಪುತ್ತೂರು: ಯುವ ಕಾಂಗ್ರೆಸ್ ಪದಾಧಿಕಾರಿಗಳ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಯವರ ಅಧ್ಯಕ್ಷತೆಯಲ್ಲಿ ಜೂ.14 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಜೂನ್ 26 ರಂದು ಆರ್ಯಾಪುನಲ್ಲಿ ನಡೆಯುವ ‘ಹಸ್ತ ಲಾಘವ’ ಕಾರ್ಯಕ್ರಮದ ರೂಪುರೇಶೆಗಳ ಬಗ್ಗೆ ಚರ್ಚಿಸಲಾಯಿತು.

ಆರ್ಯಾಪು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಯುವ ಕಾಂಗ್ರೆಸ್ ‘ಹಸ್ತ ಲಾಘವ’ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದೆ. ಈ ಕಾರ್ಯಕ್ರಮ ಮಾಡದಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈಯವರು ಸೂಚನೆ ನೀಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕಾರ್ಯಕ್ರಮ ಕೈ ಬಿಡುವುದಿಲ್ಲ, ಮಾತ್ರವಲ್ಲದೆ ನಿಗದಿತ ದಿನಾಂಕದಂದೇ ನಡೆಯುತ್ತದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ಸಭೆಯಲ್ಲಿ ತಿಳಿಸಿದರು.
ಯುವ ಕಾಂಗ್ರೆಸ್ ವತಿಯಿಂದ ಆರ್ಯಾಪಿನಲ್ಲಿ ಪಕ್ಷ ವಿರೋಧಿಯಂತಹ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ, ಪಕ್ಷಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದನ್ನು ಅತ್ಯಂತ ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡುತ್ತೇವೆ ಎಂದು ಶ್ರೀ ಪ್ರಸಾದ್ ತಿಳಿಸಿದರು.

ನಾವು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮತ್ತು ಬ್ಲಾಕ್ ಉಸ್ತುವಾರಿ ರಕ್ಷಿತ್ ಶಿವರಾಮ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹಾಗೂ ಇತರ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದು ಸಂಯೋಜಿಸಿದ್ದೆವು, ಮತ್ತು ಇದರ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಲಾಗಿತ್ತು ಹಾಗೂ ಎಲ್ಲರೂ ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ ಇದೀಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಅವರು ಈ ಕಾರ್ಯಕ್ರಮ ರದ್ದುಗೊಳಿಸುವಂತೆ ನೋಟೀಸ್ ನೀಡಿದ್ದು, ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಶ್ರೀಪ್ರಸಾದ್ ಪಾಣಾಜೆ ಸ್ಪಷ್ಟಪಡಿಸಿದರು.
ಆರ್ಯಾಪಿನಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಕಡೆಗಳಲ್ಲಿ ಇಂತಹ ‘ಹಸ್ತ ಲಾಘವ’ ಕಾರ್ಯಕ್ರಮ ಹಮ್ಮಿಕೊಂಡು ಆ ಮೂಲಕ ಮುಂದೆ ಸಂಘಟನೆಗೆ ಆದ್ಯತೆ ನೀಡಲಿದ್ದು, ಮುಂದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಾಗಲೀ, ಎಂ.ಎಲ್.ಎ ಚುನಾವಣೆಯಾಗಲೀ, ಅಥವಾ ಇನ್ನಿತರ ಚುನಾವಣೆಯಲ್ಲಿ ಪಕ್ಷ ವಿಜಯ ಪತಾಕೆ ಹಾರಿಸಲು ಇದು ಸಹಕಾರಿಯಾಗಲಿದೆ ಎಂದರು. ನಮ್ಮಲ್ಲಿ ವಿರೋಧಗಳಿದ್ದರೂ ಬಿ.ಜೆ.ಪಿ ಯ ವಿರುದ್ಧದ ಹೋರಾಟವಾಗಿದೆ ಎಂದು ಶ್ರೀ ಪ್ರಸಾದ್ ರವರು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷ ಹನೀಫ್ ಪುಣ್ಚತ್ತಾರು, ಮೊನು ಬಪ್ಪಳಿಗೆ, ಅಬ್ದುಲ್ ಜಲೀಲ್ ಬಲ್ನಾಡು, ಹಂಝತ್ ಸಾಲ್ಮರ, ಝುಬೈರ್, ಆಶಿಕ್, ರಾಬಿನ್ ತಾವ್ರೋ, ಅಬ್ದುಲ್ ರಹಿಮಾನ್ ಸಂಪ್ಯ, ಜಗದೀಶ್ ಕಜೆ, ಗಂಗಾಧರ್ ಶೆಟ್ಟಿ ಎಲಿಕಾ, ಇಸ್ಮಾಯಿಲ್ ಬಲ್ನಾಡು, ಸಮದ್ ಸಂಟ್ಯಾರ್, ಸಮದ್ ಮಾಯಂಗಳ, ಸಲೀಮ್ ಉಪ್ಪಳಿಗೆ, ಮೊಹಮ್ಮದ್ ಜುನೈದ್, ಶೇಕ್ ಇಮ್ತಿಯಾಜ್, ಚಂದ್ರಶೇಖರ ಪಡೀಲ್, ರವಿಚಂದ್ರ ಆಚಾರ್ಯ ಸಂಪ್ಯ, ಅಹಮ್ಮದ್ ಬಶೀರ್, ಅಭಿಷೇಕ್, ಮೂಸ ಕುಂಞ, ಅಬ್ದುಲ್ ಖಾದರ್, ಶಾಫಿ, ಮುಸ್ತಫಾ ಇಡಬೆಟ್ಟು, ಅಬ್ದುಲ್ ಜಮೀರ್, ಸಲೀಮ್ ಪಾವು, ರವೂಫ್, ಕಮಲೇಶ್ ಎಸ್. ವಿ., ಅಖಿಲ್, ಶಫೀಕ್ ಮೊದಲಾದವರು ಉಪಸ್ಥಿತರಿದ್ದರು.


























