ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು ಪುತ್ತೂರು ಇಲ್ಲಿ ತರಗತಿಗಳು ಆರಂಭವಾಗಿ ಒಂದು ತಿಂಗಳು ಕಳೆದರೂ ಸಮಾಜಶಾಸ್ತ್ರ ವಿಭಾಗಕ್ಕೆ ಉಪನ್ಯಾಸಕರ ನೇಮಕಾತಿ ಆಗಿಲ್ಲ ಎಂಬ ವಿಚಾರವಾಗಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ಶಾಸಕ ಸಂಜೀವ ಮಠಂದೂರು ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕಳೆದ ಸೆಮಿಸ್ಟರ್ ನಲ್ಲಿ ಇದ್ದ ಸಮಾಜಶಾಸ್ತ್ರ ಉಪನ್ಯಾಸಕರು ಬೇರೆ ಕಾಲೇಜಿಗೆ ವರ್ಗಾವಣೆಗೊಂಡ ಬಳಿಕ ಹೊಸ ಉಪನ್ಯಾಸಕರ ನೇಮಕಾತಿ ಇನ್ನೂ ಆಗಿಲ್ಲ, ಈ ವಿಚಾರವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು. ಹಿಂದಿನ ಸೆಮಿಸ್ಟರ್ ನಲ್ಲಿ ಪ್ರಥಮ ಬಿಎ ವಿದ್ಯಾರ್ಥಿಗಳು ‘accounting for everyone’ ವಿಷಯಕ್ಕೆ ಉಪನ್ಯಾಸಕರಿಲ್ಲದೆ ಸಂಕಷ್ಟ ಅನುಭವಿಸಿದ್ದಾರೆ. ಈ ಸಲ ಸಮಾಜಶಾಸ್ತ್ರ ಉಪನ್ಯಾಸಕರಿಲ್ಲದೆ ಪರದಾಡುವಂತಾಗಿದೆ. ಪರೀಕ್ಷೆಗಳು ಹತ್ತಿರ ಬರುತ್ತಿರುವಂತೆಯೇ ಉಪನ್ಯಾಸಕರು ಇಲ್ಲದಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ. ಆದಷ್ಟು ಬೇಗ ಉಪನ್ಯಾಸಕರ ವ್ಯವಸ್ಥೆ ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಶಾಸಕರು, ಮುಂದಿನ ಬುಧವಾರ ಕಾಲೇಜಿನಲ್ಲಿ ನಡೆಯುವ ಸಭೆಯಲ್ಲಿ ಈ ವಿಚಾರವನ್ನು ಪ್ರಮುಖವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಸುಳ್ಯದಿಂದ ಪುತ್ತೂರಿಗೆ ಬೆಳಗಿನ ಹೊತ್ತಲ್ಲಿ ಬಸ್ ಸರಿಯಾಗಿ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ, ಬೆಳಗ್ಗೆ 7:30 ರಿಂದ 9:00 ರ ಅವಧಿಯಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮಹಮ್ಮದ್ ಜವಾದ್, ಕೀರ್ತಿಕಾ, ರಕ್ಷಿತಾ, ಸ್ವಾತಿ, ಎಡ್ವರ್ಡ್, ಹರ್ಷಿತ್, ವಿನೀತ್, ಪ್ರಜ್ವಲ್, ಗಣೇಶ್ ಮುಂತಾದವರು ಉಪಸ್ಥಿತರಿದ್ದರು.

























