ಬೆಂಗಳೂರು: ಸ್ಯಾಂಡಲ್ವುಡ್ ಯುವ ನಟಿ ಪಾಲಿಗೆ ದಂತ ವೈದ್ಯೆಯೇ ವಿಲನ್ ಆಗಿದ್ದು, ನಗರದ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಯಡವಟ್ಟಿನಿಂದ ನಟಿಯ ಮುಖ ವಿರೂಪಗೊಂಡಿದೆ. ಹಲವು ಸಿನಿಮಾ ನಟಿಯಾಗಿ, ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮಾಡಿದ್ದ ಯುವ ಸ್ವಾತಿ ಅವರು ವೈದ್ಯರ ಎಡವಟ್ಟಿನಿಂದ ಸಮಸ್ಯೆ ಎದುರಿಸಿದ್ದಾರೆ.
ಯುವ ನಟಿ ಸ್ವಾತಿ ಅವರು ರೂಟ್ ಕ್ಯಾನಲ್ಗೆ ಚಿಕಿತ್ಸೆ ಪಡೆಯಲು ಜೆ.ಪಿ ನಗರದಲ್ಲಿರುವ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋಗಿದ್ದರು. ಹಲ್ಲಿಗೆ ಚಿಕಿತ್ಸೆ ಪಡೆದ ಬಳಿಕ ನಟಿಯ ಮುಖದಲ್ಲಿ ಭಾರೀ ಬದಲಾವಣೆಯಾಗಿತ್ತು. ಅಲ್ಲದೇ ಮುಖದಲ್ಲಿ ಊತ ಕಾಣಿಸಿಕೊಂಡು ವಿರೂಪವಾಗಿತ್ತು. ಈ ವೇಳೆ ವೈದ್ಯರನ್ನು ಸಂಪರ್ಕಿಸಿದರೇ 2 ದಿನಗಳಲ್ಲಿ ಊತ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದರಂತೆ. ಆದರೆ ಚಿಕಿತ್ಸೆ ಪಡೆದು 20 ದಿನಗಳು ಕಳೆದರೂ ಮುಖದ ಊತ ಕಡಿಮೆ ಆಗಿರಲಿಲ್ಲ. ಇದರಿಂದ ನಟಿ ಹಲವು ಅವಕಾಶಗಳನ್ನು ಕಳೆದುಕೊಂಡಿದ್ದರು.

ನಟಿಯ ಆರೋಪವೇನು..??
ರೂಟ್ಕೆನಲ್ ಟ್ರೀಟ್ಮೆಂಟ್ಗಾಗಿ ತೆರಳಿದ್ದ ವೇಳೆ ಚಿಕಿತ್ಸೆಗೂ ಮೊದಲು ಹಲ್ಲಿಗೆ ಅನಸ್ತೇಶಿಯಾ ನೀಡ್ಬೇಕಿತ್ತು. ಆದರೆ ವೈದ್ಯರು ಅನಸ್ತೇಶಿಯಾ ಬದಲಾಗಿ ಸಾಲಿಸೈಲಿಕ್ ಆ್ಯಸಿಡ್ ನೀಡಿದ್ದಾರೆ ಎಂದು ನಟಿ ಸ್ವಾತಿ ಆರೋಪ ಮಾಡಿದ್ದಾರೆ. ಸಾಲಿಸೈಲಿಕ್ ಆ್ಯಸಿಡ್ನಿಂದ ಮುಖದ ಒಳಭಾಗ ಅರ್ಧ ಬರ್ನ್ ಆಗಿ, ಏಕಾಏಕಿ ಊದಿಕೊಂಡಿತ್ತು. ಮೊದಲು 2 ಗಂಟೆಯಲ್ಲಿ ಊತ ಕಡಿಮೆಯಾಗುತ್ತೆ ಎಂದವರು, ಆ ಬಳಿಕ ಆಮೇಲೆ 6 ಗಂಟೆ, ಬಳಿಕ 2 ದಿನ, ನಂತರ 4 ದಿನ ಎಂದಿದ್ದರು. ಚಿಕಿತ್ಸೆ ಪಡೆದು ಮನೆಗೆ ತೆರಳಿದ ಎರಡೇ ಗಂಟೆಗಳಲ್ಲಿ ಮುಖದಲ್ಲಿ ಊತ ಹೆಚ್ಚಾಗಿ 20 ದಿನ ಆದ್ರು ಕಡಿಮೆ ಆಗಲಿಲ್ಲ. ಆ ಬಳಿಕ ವೈದ್ಯರಿಗೆ ಕತೆ ಮಾಡಿದರೇ ತಾನು ಮುಂಬೈಗೆ ತೆರಳಿದ್ದಾಗಿ ವೈದ್ಯೆ ತಿಳಿಸಿದ್ದರು.
ನೋವು ತಡೆಯಲಾಗದೆ ಬೇರೆ ಆಸ್ಪತ್ರೆಗೆ ತೆರಳಿ ಟೆಸ್ಟ್ ಮಾಡಿಸಿದಾದ ವೈದ್ಯೆಯ ಯಡವಟ್ಟು ಬಯಲಾಗಿದೆ. ಆದರೆ ಈಗ ಓರಿಕ್ಸ್ ಡೆಂಟಲ್ ವೈದ್ಯೆ ತಪ್ಪು ಒಪ್ಪಿಕೊಳ್ಳುತ್ತಿಲ್ಲ. ನಿಮ್ಮ ಚರ್ಮ ಬಹಳ ಸೂಕ್ಷ್ಮವಾಗಿದೆ, ನಮ್ಮ ತಪ್ಪೇನೂ ಇಲ್ಲ ಎಂದು ವೈದ್ಯೆ ಹೇಳಿದ್ದಾರೆ. ನಿರ್ಲಕ್ಷ್ಯದಿಂದ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರ ಜೀವನವನ್ನೇ ಹಾಳು ಮಾಡುವ ಇಂತಹ ವೈದ್ಯರನ್ನು ಕೆಲಸದಿಂದ ವಜಾಗೊಳಿಸಿ ಬೇಕು ಎಂದು ನಟಿ ಸ್ವಾತಿ ಅಳಲು ತೋಡಿಕೊಂಡಿದ್ದಾರೆ. ಸದ್ಯ ಸ್ವಾತಿ ಅವರು ಬೇರೊಂದು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.


























