ಪುತ್ತೂರು: ಮಳೆಗಾಲದಲ್ಲಿ ಬಾರಿ ಮಳೆ ಬರುವ ಮುನ್ಸೂಚನೆ ಸಿಕ್ಕಿದ ಕೂಡಲೇ ಮಕ್ಕಳ ರಕ್ಷಣಾ ದೃಷ್ಟಿಯಿಂದ ಮಕ್ಕಳು ಶಾಲೆಗೆ ಹೊರಡುವ ಮೊದಲೇ ರಜೆ ಘೋಷಿಸಬೇಕು ಇಲ್ಲದಿದ್ದಲ್ಲಿ ಶಾಲಾ ಮಾರ್ಗ ಮಧ್ಯದಲ್ಲಿ ಮಕ್ಕಳು ಸಿಲುಕಿ ತೀವ್ರ ಸಂಕಷ್ಟಕ್ಕೆ ಒಳಗಾಗುವರು ಹಾಗೂ ಹೆತ್ತವರು ಆತಂಕಕ್ಕೆ ಒಳಗಾಗುವುದು ತೀರಾ ಸಹಜವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ತಾಲೂಕು ಅಹಿಂದ ಒತ್ತಾಯಿಸಿದೆ.
ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ಹರಿದು, ಗುಂಡಿ ನಿರ್ಮಾಣವಾಗಿದೆ. ಇದರಿಂದ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದೆ. ಶಾಲಾ ಮಕ್ಕಳನ್ನು ಕರಕೊಂಡು ಹೋಗುವ ಆಟೋರಿಕ್ಷ ಗಳು ಈಗಾಗಲೇ ಸಾಕಷ್ಟು ಬಾರಿ ಅವಗಡಕ್ಕೆ ಈಡಾಗಿ ಅನಾಹುತಗಳು ಸಂಭವಿಸಿದೆ. ತೀವ್ರ ಮಳೆಯಿಂದ ರಸ್ತೆ ಬದಿಯ ಚರಂಡಿಗಳು, ನದಿ- ತೋಡುಗಳು, ಅಪಾಯಕಾರಿಯಾಗಿ ಹರಿಯುತ್ತಿದೆ. ಮಾತ್ರವಲ್ಲ ಮಳೆಗಾಲದಲ್ಲಿ,ತೀವ್ರ ಮಳೆಯಿಂದಾಗಿ ಶಾಲಾ ಕಟ್ಟಡಗಳು, ಮರಗಳು, ಧರೆಗಳು, ಕುಸಿಯುವ ಸಂಭವವಿರುತ್ತದೆ. ಈ ಎಲ್ಲಾ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ಹಿತಾದೃಷ್ಟಿಯಿಂದ ಜಿಲ್ಲಾಡಳಿತವು ತುರ್ತಾಗಿ ಸ್ಪಂದಿಸಿ ಮಕ್ಕಳ ಹಿತರಕ್ಷಣೆಯನ್ನು ಕಾಪಾಡಬೇಕೆಂದು ಪುತ್ತೂರು ತಾಲೂಕು ಅಹಿಂದ ಅಧ್ಯಕ್ಷ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.



























