ಮಂಗಳೂರು: ಅರ್ಕುಳ ಗ್ರಾಮದ ಅರ್ಕುಳ ಕೋಟೆ ಎಂಬಲ್ಲಿ ಅಕ್ರಮವಾಗಿ ದನ ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಬಾತಿಶ್ ಎಂಬಾತನ ಆಸ್ತಿ ಮುಟ್ಟುಗೋಲು ಹಾಕುವ ಬಗ್ಗೆ ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತರು ನೋಟೀಸ್ ಜಾರಿಗೊಳಿಸಿದ್ದಾರೆ.
ಆರೋಪಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜು.3ರಂದು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, 95ಕೆ.ಜಿ. ಜಾನುವಾರು ಮಾಂಸ, ತೂಕ ಯಂತ್ರ2, ಕತ್ತಿಗಳು 2, ಮರದ ದಿಮ್ಮಿ 1, ಪ್ಲಾಸ್ಟಿಕ್ ಬುಟ್ಟಿಗಳು 1, ಪ್ಲಾಸ್ಟಿಕ್ ಬಕೆಟ್ಗಳು 2, ಕಬ್ಬಿಣದ ಕೊಕ್ಕೆ ವಶಪಡಿಸಿಕೊಂಡಿದ್ದರು. ಎ.ಕೆ. ಖಾಲಿದ್ ಎಂಬವರ ಮನೆಗೆ ತಾಗಿಕೊಂಡ ಶೆಡ್ನಲ್ಲಿ ಆರೋಪಿ ಅಕ್ರಮ ಕೃತ್ಯವೆಸಗುತ್ತಿದ್ದ. ದಾಳಿ ವೇಳೆ ಆರೋಪಿ ಪರಾರಿಯಾಗಿದ್ದ.
ಆರೋಪಿ ಯಾವುದೇ ಪರವಾನಗಿ ಇಲ್ಲದೆ ಜಾನುವಾರು ವಧೆ ಮಾಡಲು ಬಳಸಿಕೊಂಡ ಕಾರಣ ಕೃತ್ಯಕ್ಕೆ ಬಳಸಿದ ಸ್ಥಳ ಮತ್ತು ಸೊತ್ತುಗಳನ್ನು ಯಾಕೆ ಮುಟ್ಟುಗೋಲು ಹಾಕಬಾರದು ಎಂಬ ಬಗ್ಗೆ ವಿಚಾರಣೆ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ಜು.12ರಂದು 3ಗಂಟೆಗೆ ನಡೆಯಲಿದೆ. ಈ ದಿನ ಅಧಿಕೃತ ಪ್ರತಿನಿಧಿ ಅಥವಾ ವಕೀಲರ ಮೂಲಕ ವಾದ, ಆಕ್ಷೇಪಣೆಗಳನ್ನು ಸಲ್ಲಿಸುವುದು. ತಪ್ಪಿದಲ್ಲಿ ನಿಯಾಮಾನುಸಾರ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನೋಟಿಸಿನಲ್ಲಿ ಆಯುಕ್ತರು ತಿಳಿಸಿದ್ದಾರೆ.



























