ಕಾಣಿಯೂರು: ಕಾರೊಂದು ಹೊಳೆಗೆ ಬಿದ್ದಿರುವ ಘಟನೆ ಜು.9 ರಂದು ರಾತ್ರಿ ಕಾಣಿಯೂರು ಬೈತಡ್ಕದಲ್ಲಿ ನಡೆದಿದ್ದು, ನೀರುಪಾಲಾಗಿರುವ ಕಾರು ಇದೀಗ ಪತ್ತೆಯಾಗಿದೆ. ಆದರೇ ಕಾರಿನಲ್ಲಿದ್ದ ಪ್ರಯಾಣಿಕರು ಇನ್ನೂ ಪತ್ತೆಯಾಗದ ಹಿನ್ನೆಲೆ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.

ಇದೆಲ್ಲದರ ನಡುವೆ ಧನುಷ್ ನ ಸಂಬಂಧಿಯೊಬ್ಬರು ನೀಡಿದ ಮಾಹಿತಿ ಹಲವು ಗೊಂದಲಗಳನ್ನು ಸೃಷ್ಟಿ ಮಾಡಿದೆ. ಕಾರಿನಲ್ಲಿದ್ದ ಧನುಷ್ ಕಾರು ಅಪಘಾತದ ಬಗ್ಗೆ ತನ್ನ ಮನೆಗೆ ಫೋನ್ ಮಾಡಿದ್ದ ಎಂದು ಹೇಳಲಾಗುತ್ತಿದೆ.
ಮನೆಯವರಿಗೆ ಕಾಲ್ ಮಾಡಿದ್ದ ಧನುಷ್ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎಂದಿದ್ದು, ನಂತರ ಕರೆ ಮಾಡಿದರೆ ಆ ನಂಬರ್ ಸ್ವಿಚ್ ಆಫ್ ಆಗಿದೆ ಎಂದು ಸಂಬಂಧಿಕರೋರ್ವರು ಮಾಹಿತಿ ನೀಡಿದ್ದಾರೆ.
ಸದ್ಯ ಮನೆಗೆ ಕರೆ ಬಂದ ನಂಬರ್ ನ ಲೊಕೇಶನ್ ಟ್ರೇಸ್ ಮಾಡುತ್ತಿರುವ ಪೊಲೀಸರಿಗೆ ಕಾರು ಬಿದ್ದ ಜಾಗದಲ್ಲಿ ಕೊನೆಯ ಲೊಕೇಶನ್ ಟ್ರೇಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾರು ಹೊಳೆಗೆ ಬಿದ್ದ ದೃಶ್ಯ ಮಸೀದಿಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೊಳೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆ ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬಿದ್ದ ಜಾಗದಿಂದ 100 ಮೀ. ದೂರದಲ್ಲಿ ಕಾರು ಪತ್ತೆಯಾಗಿತ್ತು. ಆದರೇ ಅದನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದಾಗ ನೀರು ಹರಿಯುವ ರಭಸಕ್ಕೆ ಕಾರು ಮತ್ತೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇದೀಗ ಮತ್ತೆ ಹರಸಾಹಸ ಪಟ್ಟು ಅಗ್ನಿಶಾಮಕ ದಳದ ಸಿಬ್ಬಂದಿ ಕಾರನ್ನು ಮೇಲಕ್ಕೆತ್ತಿದ್ದಾರೆ.
ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಬೇರೆ ಬೇರೆ ಕಡೆಗಳಿಂದ ವಾಹನಗಳಲ್ಲಿ ಬಂದು ಶೋಧ ಕಾರ್ಯವನ್ನು ವೀಕ್ಷಿಸುತ್ತಿದ್ದಾರೆ. ಯುವಕರಿಗಾಗಿ ಶೋಧ ಕಾರ್ಯ ತೀವ್ರವಾಗಿ ನಡೆಯುತ್ತಿದೆ.



























