ಕಾಣಿಯೂರು: ಕಾರೊಂದು ಹೊಳೆಗೆ ಬಿದ್ದಿರುವ ಘಟನೆ ಜು.9 ರಂದು ರಾತ್ರಿ ಕಾಣಿಯೂರು ಬೈತಡ್ಕದಲ್ಲಿ ನಡೆದಿದ್ದು, ನೀರುಪಾಲಾಗಿರುವ ಕಾರು ಪತ್ತೆಯಾಗಿದ್ದು, ನಿನ್ನೆ ಬೆಳಿಗ್ಗಿನಿಂದ ಸಂಜೆಯವರೆಗೂ ಹುಡುಕಾಡಿದರೂ ಪ್ರಯಾಣಿಕರ ಬಗ್ಗೆ ಪತ್ತೆಯಾಗಿಲ್ಲ. ಕತ್ತಲಾದ ಹಿನ್ನೆಲೆ ಎಸ್.ಡಿ.ಆರ್.ಎಫ್ ತಂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಇಂದು ಮುಂಜಾನೆಯಿಂದ ಪುನಃ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇಂದು ಸಂಜೆಯವರೆಗೂ ಯುವಕರು ಪತ್ತೆಯಾಗಿಲ್ಲ. ಕತ್ತಲಾದ ಹಿನ್ನೆಲೆ ಎರಡನೇ ದಿನದ ಕಾರ್ಯಾಚರಣೆ ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬೈತಡ್ಕದಲ್ಲಿ ಕಾರು ನೀರಿಗೆ ಬಿದ್ದು ಯುವಕರಿಬ್ಬರೂ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ನಿನ್ನೆ ಬೆಳಿಗ್ಗಿನಿಂದ ಸಂಜೆಯವರೆಗೂ ಹುಡುಕಾಟ ನಡೆಸಿದ ಎಸ್.ಡಿ. ಆರ್. ಎಫ್ ತಂಡ ಕತ್ತಲಾದ ಹಿನ್ನೆಲೆ ನೀರಿನ ರಭಸ ಹೆಚ್ಚಾಗಿದ್ದು ಈ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಿದ್ದರು. ಇಂದು ಬೆಳಿಗ್ಗೆ ಕಾರ್ಯಚರಣೆಯನ್ನು ಆರಂಭಿಸಿರುವ ತಂಡ ಯುವಕರ ಪತ್ತೆಗಾಗಿ ಸಂಜೆಯವರೆಗೂ ಹುಡುಕಾಟ ನಡೆಸಿದ್ದು, ಇದೀಗ ಎರಡನೇ ದಿನದ ಕಾರ್ಯಾಚರಣೆಯೂ ಸ್ಥಗಿತಗೊಂಡಿದೆ.

48 ಗಂಟೆ ಕಳೆದರೂ ಪತ್ತೆಯಾಗದ ಯುವಕರು:
ಬೈತಡ್ಕ ಹೊಳೆಗೆ ಕಾರು ಬಿದ್ದು, 48 ಗಂಟೆ ಕಳೆದರೂ ಯುವಕರ ಬಗ್ಗೆ ಯಾವ ಸುಳಿವು ಸಿಕ್ಕಿಲ್ಲ. ಕಾರು ಪತ್ತೆಯಾದರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರ ಬಗ್ಗೆ ಯಾವುದೇ ಸುಳಿವು ಸಿಗದೆ ಇರುವುದು ಎಲ್ಲರಲ್ಲೂ ಆತಂಕ ಮತ್ತು ಗೊಂದಲವನ್ನುಂಟು ಮಾಡಿದೆ.
ಹೊಳೆಯಲ್ಲಿ ಸಿಕ್ಕಿರುವ ಕಾರಿನ ಮಾಲಕ ಧನುಷ್ ರವರು ನಾಪತ್ತೆಯಾಗಿದ್ದಾರೆ ಎಂದು ಅವರ ತಂದೆ ಠಾಣೆಯಲ್ಲಿ ದೂರನ್ನು ಸಹ ನೀಡಿದ್ದಾರೆ. ಅದೇ ರೀತಿ ಕಾರಿನಲ್ಲಿದ್ದ ಮತ್ತೊಬ್ಬ ಯುವಕ ಕನ್ಯಾನ ಕೋನಾಲೆ ನಿವಾಸಿ ಧನಂಜಯ(26) ರವರು ಕೂಡ ನಾಪತ್ತೆಯಾದ ಬಗ್ಗೆ ಅವರ ಸಹೋದರ ಠಾಣೆಗೆ ದೂರು ನೀಡಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಸಹೋದರ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನೀರಿನಲ್ಲಿ ಕಾರು ಸಿಕ್ಕಿದರೂ ಯುವಕರು ನಿಗೂಢವಾಗಿ ಕಣ್ಮರೆಯಾಗಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೇ ಕೆಲವು ಊಹಪೋಹಗಳು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಎಲ್ಲದಕ್ಕೂ ಉತ್ತರ ಯುವಕರ ಸುಳಿವು ದೊರೆತ ನಂತರವಷ್ಟೇ ತಿಳಿಯಬೇಕಿದೆ..
ಕಾರು ಹೊಳೆಗೆ ಬಿದ್ದ ದೃಶ್ಯ ಮಸೀದಿಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೊಳೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆ ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬಿದ್ದ ಜಾಗದಿಂದ 100 ಮೀ. ದೂರದಲ್ಲಿ ಕಾರು ಪತ್ತೆಯಾಗಿತ್ತು. ಆದರೇ ಅದನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದಾಗ ನೀರು ಹರಿಯುವ ರಭಸಕ್ಕೆ ಕಾರು ಮತ್ತೆ ನೀರಿನಲ್ಲಿ ಕೊಚ್ಚಿ ಹೋಗಿತ್ತು., ಇದೀಗ ಮತ್ತೆ ಹರಸಾಹಸ ಪಟ್ಟು ಅಗ್ನಿಶಾಮಕ ದಳದ ಸಿಬ್ಬಂದಿ ಕಾರನ್ನು ಮೇಲಕ್ಕೆ ಎತ್ತಿದ್ದರು.
ಕಾರು ವಿಟ್ಲ ಕುಂಡಡ್ಕ ನಿವಾಸಿ ಧನುಷ್(26) ರವರದ್ದು ಎಂದು ತಿಳಿದು ಬಂದಿದ್ದು ಹಾಗೂ ಕಾರಿನಲ್ಲಿ ವಾಹನ ಚಲಾಯಿಸುತ್ತಿದ್ದ ಧನುಷ್ ರವರ ಸಂಬಂಧಿ ಕನ್ಯಾನದ ಮೂಲದ ಧನಂಜಯ (26) ಕೂಡ ಇದ್ದರು ಎಂದು ತಿಳಿದು ಬಂದಿದೆ. ಇವರಿಬ್ಬರು ಜು.9 ರಂದು ರಾತ್ರಿ ಮನೆಯಿಂದ ಹೊರಟಿದ್ದಾರೆ ಎನ್ನಲಾಗಿದೆ.


























