ಬಂಟ್ವಾಳ: ಕ್ಷುಲ್ಲಕ ಕಾರಣಕ್ಕಾಗಿ ದ್ವಿಚಕ್ರ ವಾಹನ ಸವಾರನೋರ್ವ ಸರಕಾರಿ ವಾಹನವೊಂದರ ಗ್ಲಾಸ್ ಪುಡಿ ಮಾಡಿದ್ದಲ್ಲದೆ, ಕಾರಿನಲ್ಲಿದ್ದ ಸರಕಾರಿ ಅಧಿಕಾರಿಗಳಿಗೆe ಹಲ್ಲೆಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ಬೈದಿರುವ ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಜೀಪನಡು ಗ್ರಾಮದ ಕೋಣಿಮಾರ್ ನಿವಾಸಿ ಮಹಮ್ಮದ್ ಸಂಶುದ್ಧಿನ್ ಬಂಧಿತ(22) ಯುವಕ.

ಈ ಬಗ್ಗೆ ಕಾರು ಚಾಲಕ ಬಳ್ಳಾಲ್ ಬಾಗ್ ನಿವಾಸಿ ದೇವದಾಸ(57) ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನನ್ನು ಬಂಧಿಸಲಾಗಿದೆ.
ಪುತ್ತೂರು ತಾಲೂಕು ಪಂಚಾಯತ್ ನಲ್ಲಿ ಜರುಗುವ ಎಡಿ,ಎಚ್.ಒ.ಸಿ., ಸಭೆಗೆ ಲೆಕ್ಕಾಧಿಕಾರಿ ಮತ್ತು ಲೆಕ್ಕಾಧಿಕ್ಷಕ ರವರನ್ನು ಕರೆದುಕೊಂಡು ಮಂಗಳೂರಿನಿಂದ ಪುತ್ತೂರು ಕಡೆಗೆ ಸರಕಾರಿ ವಾಹನದಲ್ಲಿ ತೆರಳುತ್ತಿದ್ದ ವೇಳೆ ತುಂಬೆ ಎಂಬಲ್ಲಿಗೆ ತಿರುವ ರಸ್ತೆಯಲ್ಲಿ ಚಾಲಕರು ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಅದರ ಸವಾರರು ಒಮ್ಮಲೇ ರಸ್ತೆ ಗುಂಡಿಯನ್ನು ತಪ್ಪಿಸಲು ನಿಧಾನ ಮಾಡಿದಾಗ ಸದ್ರಿ ಕಾರಿನ ಚಾಲಕರು ಕೂಡ ಕಾರನ್ನು ನಿಧಾನಗೊಳಿಸಿದ್ದು, ಆಗ ಕಾರಿನ ಹಿಂದುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನು ವೇಗ ನಿಯಂತ್ರಸಲಾಗದೆ ರಸ್ತೆಯ ಬಳಿಯಲ್ಲಿ ಸ್ಕಿಡ್ ಆಗಿ ಬಿದ್ದನು. ಆ ಸಮಯ ಕಾರಿನ ಚಾಲಕರು ವಾಹನದ ಬದಿಯ ಕನ್ನಡಿಯಲ್ಲಿ ನೋಡಿ ಮುಂದೆ ಹೋಗಿ ವಾಹನವನ್ನು ನಿಲ್ಲಿಸುವಷ್ಟರಲ್ಲಿ ಸ್ಕೂಟರ್ ಸವಾರ ಅಲ್ಲಿಂದ ಎದ್ದು ಅದೇ ಸ್ಕೂಟರ್ ನಲ್ಲಿ ವಾಹನದ ಎದುರು ಅಡ್ಡಲಾಗಿ ನಿಲ್ಲಿಸಿ ಕಾರನ್ನು ಮುಂದೆ ಚಲಾಯಿಸದಂತೆ ತಡೆದು ಆತನ ವಾಹನದಿಂದ ಇಳಿದು ಬಂದವನು ಕಾರಿನ ಚಾಲಕನಿಗೆ ಅವಾಚ್ಯ ಬೈದು, ‘ನೀನು ಯಾಕೆ ಕಾರು ಸ್ಲೋ ಮಾಡಿದ್ದು, ನಾನು ನಿನ್ನ ಕಾರಿಗೆ ಗುದ್ದಿ ಸಾಯಬೇಕ’ ಎಂದು ಬೈಯ್ಯುತ್ತ ಕಾರಿನ ಬಲಗಡೆಯ ಸೈಡ್ ಮಿರರನ್ನು ಮುರಿದು ಹಾಕಿದ್ದಲ್ಲದೇ, ಬೊನಟ್ಟೆಗೆ ಕೈಯಿಂದ ಹೊಡೆದು ಮುಂದಕ್ಕೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಮಂಗಳೂರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ರವರ ಮಾರ್ಗದರ್ಶನದಂತೆ ಪೊಲೀಸ್ ಉಪಾಧೀಕ್ಷಕರು ಬಂಟ್ವಾಳ ರವರ ನಿರ್ದೇಶನದಂತೆ ಬಂಟ್ವಾಳ ಗ್ರಾಮಾಂತರ ಠಾಣಾ ಅಧಿಕಾರಿ, ಸಿಬ್ಬಂದಿಯವರು ಯುವಕನನ್ನು ದಸ್ತಗಿರಿ ಮಾಡಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.


























