ಉಡುಪಿ: ಶಿರೂರು ಆ್ಯಂಬುಲೆನ್ಸ್ ಅಪಘಾತ ದುರಂತ ಪ್ರಕರಣದಲ್ಲಿ ಪವಾಡ ರೀತಿಯಂತೆ ಪರಾಗಿದ್ದ ಚಾಲಕ ರೋಷನ್ನನ್ನು ಪೊಲೀಸರು ಇಂದು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ರೋಷನ್ ಬೈಂದೂರು ಪೊಲೀಸರ ವಶದಲ್ಲಿದ್ದು, ವೈದ್ಯಕೀಯ ಪರೀಕ್ಷೆಗೆ ಚಾಲಕನ ರಕ್ತದ ಮಾದರಿಯನ್ನ ಮಣಿಪಾಲದ ಆಸ್ಪತ್ರೆಗೆ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಡುಪಿ ಶಿರೂರು ಟೋಲ್ ಗೇಟ್ ಬಳಿ ನಿನ್ನೆ ಸಂಭವಿಸಿದ್ದ ಅಪಘಾತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದರು.
ದುರಂತರದಲ್ಲಿ ಆ್ಯಂಬುಲೆನ್ಸ್ನಲ್ಲಿದ್ದವರು ಸೇರಿದಂತೆ ನಾಲ್ವರು ಮೃತಪಟ್ಟಿದ್ದರು. ಅಪಘಾತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಘಟನೆಯಲ್ಲಿ ಪವಾಡ ಎಂಬಂತೆ ಗಾಯಗಳೊಂದಿಗೆ ಪರಾಗಿದ್ದ ರೋಷನ್ ಅಪಘಾತಕ್ಕೆ ಹಸು ಅಡ್ಡ ಬಂದಿದ್ದು, ಹಾಗೂ ಟೋಲ್ ಗೇಟ್ ಸಿಬ್ಬಂದಿ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಯ್ತು ಎಂದು ಆರೋಪಿಸಿದ್ದರು.
ಈ ನಡುವೆ ಚಾಲಕ ಮದ್ಯ ಸೇವನೆ ಮಾಡಿ ಆ್ಯಂಬುಲೆನ್ಸ್ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಚಾಲಕನ ರಕ್ತದ ಮಾದರಿ ಮಣಿಪಾಲದ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇಂದು ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.



























