ಪುತ್ತೂರು: ಹೊಸ ಹೊಸ ಸಾಂಕ್ರಾಮಿಕ ರೋಗ ಹರಡುವ ಈ ಸಂದರ್ಭದಲ್ಲಿ ಜನರು ತಮ್ಮ ಆರೋಗ್ಯ ಕಾಪಾಡಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಚ್ ಮಹಮ್ಮದ್ ಅಲಿ ಹೇಳಿದರು.

ಅವರು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಆರ್ಯಾಪು ಸಹಕಾರಿ ಸಂಘದ ಕಟ್ಟಡದಲ್ಲಿ ಪ್ರಾರಂಭವಾದ ಸಮುದಾಯ ಆರೋಗ್ಯ ಉಪಕೇಂದ್ರ ಹಾಗೂ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ ತಮ್ಮ ಹಿರಿಯರು ಅವರ ಕಾಲದಲ್ಲಿ ಗಟ್ಟಿಮುಟ್ಟಾಗಿ ಆರೋಗ್ಯವಂತರಾಗಿದ್ದರು., ಕಾಲ ಕಳೆದಂತೆ ಊರು ಅಭಿವೃದ್ಧಿಯಾಗುತ್ತಾ ಹೊಸ ಹೊಸ ರೋಗಗಳು ಜನರನ್ನು ಕಾಡಲು ಶುರುವಾಯಿತು. ಇದಕ್ಕೆಲ್ಲ ನಮ್ಮ ಆಹಾರ ಪದ್ಧತಿ ಹಾಗೂ ಬದಲಾದ ಜನರ ಜೀವನ ಶೈಲಿಯೇ ಕಾರಣ ಎಂದ ಅವರು ಜನರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಆರೋಗ್ಯ ಇಲಾಖೆ ಇಂತಹ ಉಪ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿದೆ ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಹೇಳಿದ ಅಲಿಯವರು ಕಳೆದ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರು, ಆಶಾಕಾರ್ಯಕರ್ತೆಯರು ಸಮುದಾಯ ಆರೋಗ್ಯ ಅಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಜನಸೇವೆ ಮಾಡಿರುತ್ತಾರೆ. ಇವರ ಈ ಸೇವೆಯಿಂದಾಗಿ ಜನರಿಗೆ ಆರೋಗ್ಯ ಇಲಾಖೆಯ ಮಹತ್ವ ಅರಿವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ದೀಪಕ್ ರೈಯವರು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಸಮುದಾಯ ಆರೋಗ್ಯ ಉಪ ಕೇಂದ್ರವನ್ನು ಹಲವಾರು ಕಡೆ ನಮ್ಮ ಇಲಾಖೆ ಪ್ರಾರಂಭಿಸಿದೆ. ಆಸ್ಪತ್ರೆ ಎಂಬುದು ರೋಗಿಗಳಿಗೆ ಸಂಬಂಧಪಟ್ಟ ಸ್ಥಳ ಎಂಬ ಭಾವನೆಯನ್ನುತೊಡೆದು ಹಾಕಿ, ಇಂತಹ ಸಮುದಾಯ ಆರೋಗ್ಯ ಕೇಂದ್ರಗಳು ರೋಗಿಗಳ ಕೇಂದ್ರವಲ್ಲ ಎಲ್ಲಾ ಜನರಿಗೆ ಬೇಕಾಗಿರುವ ಕೇಂದ್ರವಾಗಿ ಪರಿವರ್ತಿಸುವ ಸಲುವಾಗಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಪ್ರಥಮ ಚಿಕಿತ್ಸೆಯಿಂದ ಹಿಡಿದು ಜನರ ಎಲ್ಲಾ ಆರೋಗ್ಯ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.
ಆರೋಗ್ಯ ಶಿಬಿರ ನಡೆಸುವ ಹಾಗೂ ಯೋಗ ತರಬೇತಿ ನೀಡುವ ಉದ್ದೇಶವಿದೆ ಎಂದು ಹೇಳಿದ ಡಾ. ದೀಪಕ್ ರೈ ಯವರು ಅಯುಷ್ಮಾನ್ ಯೋಜನೆ ಸಹಿತ ಇಲಾಖೆಯ ಇನ್ನಿತರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಉಪ ಕೇಂದ್ರ ಪ್ರಾರಂಭಿಸಲು ಸ್ವತಹ ಕಟ್ಟಡಗಳು ಇಲ್ಲದಿರುವುದರಿಂದ ಖಾಸಗಿ ಕಟ್ಟಡದಲ್ಲಿ ಕೇಂದ್ರ ಪ್ರಾರಂಭಿಸಬೇಕಾಗಿದೆ. ಈ ಉಪ -ಕೇಂದ್ರ ನಡೆಸಲು ಸ್ಥಳವಕಾಶ ಒದಗಿಸಿಕೊಟ್ಟ ಸಹಕಾರಿ ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಉಪಾಧ್ಯಕ್ಷರಾದ ಪೂರ್ಣಿಮ ರೈ ಯವರು ಮಾತನಾಡಿ, ಆರೋಗ್ಯ ಉಪ ಕೇಂದ್ರಕ್ಕೆ ಶುಭ ಹಾರೈಕೆ ಮಾಡಿದರು. ಸಮಾರಂಭದ ವೇದಿಕೆಯಲ್ಲಿ ಆರ್ಯಾಪು ಪಂಚಾಯತ್ ಕಾರ್ಯದರ್ಶಿ ಮೋನಪ್ಪ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಜಯಂತಿ ಬಾಸ್ಕರ್, ತಿಂಗಳಾಡಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ನೇತ್ರ ಉಪಸ್ಥಿತರಿದ್ದರು. ಅರಿಯಡ್ಕ ಸಮುದಾಯ ಆರೋಗ್ಯ ಅಧಿಕಾರಿ ಕು. ಚೇತನ, ಹಾಗೂ ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅರ್ಯಾಪು ಸಮುದಾಯ ಆರೋಗ್ಯ ಅಧಿಕಾರಿ ಕು. ಕ್ಷಮಾ ಪಿ ಕೆ ಸ್ವಾಗತಿಸಿದರು., ಒಳಮೊಗರು ಸಮುದಾಯ ಅರೋಗ್ಯ ಅಧಿಕಾರಿ ಕು. ಶಶಿಕಲಾ ವಂದಿಸಿದರು. ಮಾಡ್ನೂರು ಸಮುದಾಯ ಅಧಿಕಾರಿ ಅಶ್ವಿನಿ ಕಾರ್ಯಕ್ರಮದ ನಿರ್ವಹಣೆ ಮಾಡಿದರು.



























