ಮಂಗಳೂರು: ಕಳೆದ ಕೆಲವು ದಿನಗಳಿಂದ ಬಿಸಿಲ ವಾತಾವರಣವಿದ್ದ ಕರಾವಳಿಯಲ್ಲಿ ಇದೀಗ ತಡರಾತ್ರಿಯಿಂದ ಮತ್ತೆ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಪರಿಣಾಮ ಮಂಗಳೂರು ನಗರ ಸೇರಿದಂತೆ ಹಲವು ಪ್ರದೇಶಗಳು ಮಳೆಯ ರಣಾರ್ಭಟಕ್ಕೆ ತತ್ತರಿಸಿ ಹೋಗಿವೆ.

ಹಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಾಂಡೇಶ್ವರ ಶಿವನಗರ ಭಾಗದಲ್ಲಿ ಮನೆಗಳು ಜಲಾವೃತಗೊಂಡಿವೆ. ಕರಂಗಲ್ಪಾಡಿ, ಮಂಗಳೂರು ರೈಲ್ವೆ ನಿಲ್ದಾಣ , ಪಂಪ್ ವೆಲ್, ಪಡೀಲ್, ಅತ್ತಾವರ ಹೀಗೆ ಹಲವು ಪ್ರದೇಶದಲ್ಲಿ ಅಂಗಡಿ ಮುಂಗಟ್ಟು ಗಳಿಗೆ ನೀರು ನುಗ್ಗಿದ್ದು, ರಸ್ತೆ ತುಂಬಾ ನೀರು ಆವರಿಸಿಕೊಂಡಿದೆ.

ಜು.30ರ ನಸುಕಿನ ಜಾವದಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು, ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಉಳ್ಳಾಲ, ಮೂಲ್ಕಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.



























