ವಿಟ್ಲ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವಿಶೇಷ ಕಾರ್ಯಕ್ರಮಗಳಾದ ‘ವನಸಿರಿ’ ಹಾಗೂ “ಆರೋಗ್ಯ ಸಿರಿ” ಕಾರ್ಯಕ್ರಮ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ನಡೆಯಿತು.

“ವನಸಿರಿ” ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಫಲವಸ್ತುಗಳ ಗಿಡಗಳ ನಾಟಿ ಮಾಡಲಾಯಿತು. ಬಳಿಕ “ಆರೋಗ್ಯ ಸಿರಿ” ಕಾರ್ಯಕ್ರಮದ ಅಡಿಯಲ್ಲಿ ಮಜಿ ಶಾಲಾ ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳಿಗೆ ಬಿಸಿ ಊಟದ ಜೊತೆಗೆ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ರೊಟೇರಿಯನ್ ಚಿತ್ತರಂಜನ್ ಶೆಟ್ಟಿ ಬೊಂಡಾಲ ರವರು ಶಾಲೆಯ ಸುತ್ತಮುತ್ತ ಹಸಿರುಮಯ ಗೊಳಿಸುವ ಸಲುವಾಗಿ ಶಾಲಾ ಆವರಣದ ಸುತ್ತಮುತ್ತ ಫಲ ವಸ್ತುಗಳ ಗಿಡಗಳ ನಾಟಿ ಮಾಡುವುದರ ಮೂಲಕ ಮಕ್ಕಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಉತ್ತಮ ಪರಿಸರ ಸಿಗುವಂತಾಗುತ್ತದೆ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈಗಾಗಲೇ ಸರಕಾರವು ಒಂದನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರವೇ ಬಿಸಿ ಊಟದ ಜೊತೆಗೆ ಮೊಟ್ಟೆ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳು ಈ ಭಾಗ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡು ಅವರ ಆರೋಗ್ಯವು ಉತ್ತಮವಾಗಲೆಂದು ತಮ್ಮ ಸಂಘದ “ಆರೋಗ್ಯ ಸಿರಿ ” ಕಾರ್ಯಕ್ರಮದ ಮೂಲಕ ಮೊಟ್ಟೆ ವಿತರಣೆ ಮಾಡುತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಉಮೇಶ್ ಆರ್ ಮೂಲ್ಯ, ಖಜಾಂಜಿ ವಚನ್ ಶೆಟ್ಟಿ, ಸುರೇಶ್ ಸಾಲಿಯಾನ್, ಕಿಶೋರ್ ಕುಮಾರ್, ಸುಕುಮಾರ್ , ದೇಜಪ್ಪ, ಮನೋಜ್ ಕನಪ್ಪಡಿ, ನಾರಾಯಣ್ ಪೆರ್ನೆ, ರೋಶನ್ ರೈ, ಪ್ರಸಾದ್, ವೀರಕಂಭ ಗ್ರಾಮ ಪಂಚಾಯತ್ ಸದಸ್ಯೆ ಮೀನಾಕ್ಷಿ ಸುನಿಲ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಕಾರ್ಯದರ್ಶಿ ಚಿನ್ನಾ ಮೈರಾ, ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಮತ್ತು ಅಧ್ಯಾಪಕ ವೃಂದ, ವಿದ್ಯಾರ್ಥಿ ನಾಯಕಿ ಮಾನಸ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.



























