ಕಾರವಾರ: ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗದಲ್ಲಿ ಪರೇಶ್ ಮೇಸ್ತಾ ಕೊಲೆ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಕೊಲೆ ಹಿಂದೆ ಅನ್ಯ ಕೋಮಿನ ಕೈವಾಡವಿದೆ ಅಂತಾ ಅನುಮಾನಿಸಲಾಗಿತ್ತು. ಹೀಗಾಗಿ ಯುವಕನ ಸಾವಿಗೆ ನ್ಯಾಯ ಸಿಗಬೇಕು ಮತ್ತು ಕೊಲೆ ಮಾಡಿದವರಿಗೆ ಸೂಕ್ತ ರೀತಿಯಲ್ಲಿ ಕ್ರಮ ಆಗಬೇಕು ಅಂತಾ ಅಂದಿನ ಸರ್ಕಾರದ ವಿರುದ್ದ ಜಿಲ್ಲೆಯಲ್ಲಿ ಬೆಂಕಿ ಜ್ವಾಲೆಯೇ ಹತ್ತಿತ್ತು. ಅದೇ ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನ ಸಿಬಿಐ ಗೆ ಒಪ್ಪಿಸಿತ್ತು. ಆದರೆ ಅಂದು ಒಂದನೇ ಆರೋಪಿಯಾಗಿದ್ದ ಆಜಾದಿ ಅಣ್ಣಿಗೇರಿಗೆ ವಕ್ಪ ಬೋರ್ಡ್ ನ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಹೀಗಾಗಿ ಇದರ ವಿರುದ್ಧದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ನಡೆಯುತ್ತಿದೆ.
ಪ್ರಕರಣ ಹಿನ್ನೆಲೆ:
ಹೊನ್ನಾವರದ ಪರೇಶ್ ಮೇಸ್ತಾ ಮೃತಪಟ್ಟು 5 ವರ್ಷ ಕಳೆಯುತ್ತಾ ಬಂತು. ಅಂದು 2017ರ ಡಿಸೆಂಬರ್ 6 ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ 21 ವರ್ಷದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರದ ಶನಿ ದೇವಾಲಯದ ಹಿಂಭಾಗದಲ್ಲಿನ ಶೆಟ್ಟಿ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಗರು ಆರೋಪಿಸಿದರು. ಈ ವೇಳೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ತದ ನಂತರ ಪರೇಶನದ್ದು ಕೊಲೆ ಎಂದು ಕುಟುಂಬದವರು ಕೂಡ ಆರೋಪಿಸಿದರು. ಅಂದು ಕರಾವಳಿ ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ಗಲಭೆ ನಡೆದು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಯಿತು. ನಂತರ ಈ ಪ್ರಕರಣ ರಾಜಕೀಯ ತಿರುವು ಪಡೆದು ಬಿಜೆಪಿ ಹಾಗೂ ಪರೇಶನ ತಂದೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ಅದರಂತೆ ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಕರಣ ಸಿಬಿಐಗೆ ವಹಿಸಿತು.
ಬಿಜೆಪಿ ವಿರುದ್ಧ ಆಕ್ರೋಶ:
ಇನ್ನು ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡು ನಾಲ್ಕು ವರ್ಷ ಕಳೆದಿದೆ. 2018ರ ಏಪ್ರಿಲ್ 23ರಂದು ಚೆನ್ನೈ ಸಿಬಿಐ ವಿಭಾಗದಲ್ಲಿ ದಾಖಲಾಗಿದ್ದ ಎಫ್ಐಆರ್ನಲ್ಲಿ ನಮೂದಾಗಿದ್ದ ಆರೋಪಿಗಳೆಲ್ಲರೂ ಸದ್ಯ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದಾರೆ. ಆದರೆ ಪರೇಶನ ಸಾವಿಗೆ ನಿಖರ ಕಾರಣ ಮಾತ್ರ ಇನ್ನೂ ತಿಳಿದು ಬಂದಿಲ್ಲ.
ಇನ್ನು ಪ್ರಕರಣದಲ್ಲಿ ಪರೇಶನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಅಂದು ಹೋರಾಟ ನಡೆಸಿದ್ದ ಬಿಜೆಪಿ ನಾಯಕರುಗಳು, ಹಿಂದೂ ಸಂಘಟನೆಗಳ ಬಳಿ ಇಂದು ಸಿಬಿಐ ತನಿಖೆ ಯಾವ ಹಂತದಲ್ಲಿದೆ ಎಂಬ ಮಾಹಿತಿಯೇ ಇಲ್ಲ. ಇದರ ಮಧ್ಯೆ ಈಗ ಪರೇಶ್ ಮೆಸ್ತಾ ಪ್ರಕರಣದಲ್ಲಿ ಆರೋಪಿಯಾದವನಿಗೆ ವಕ್ಫ್ ಬೋರ್ಡ ಉಪಾಧ್ಯಕ್ಷ ಸ್ಥಾನವನ್ನ ಬಿಜೆಪಿ ಸರ್ಕಾರ ನೀಡಿದೆ. ಆಜಾದ್ ಅಣ್ಣಿಗೇರಿ ಎನ್ನುವವರಿಗೆ ಜಿಲ್ಲಾ ವಕ್ಪ ಬೋಡ್೯ ಉಪಾಧ್ಯಕ್ಷ ಸ್ಥಾನ ನೀಡಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಆರೋಪಿತನಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ ಹೀಗಾಗಿ ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆ ಪ್ರಾರಂಭವಾಗಿದೆ. ಇನ್ನೂ ವಕ್ಫ್ ಬೋರ್ಡ್ ಪದಾಧಿಕಾರಿಗಳನ್ನ ಬದಲಿಸುವಂತೆ ಸಚಿವರಿಗೆ ಅಧ್ಯಕ್ಷ ಅನೀಷ್ ತಹಶಿಲ್ದಾರ ಪತ್ರ ಬರೆದಿದ್ದಾರೆ. ಈ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಒಟ್ಟಾರೆಯಾಗಿ, ಓರ್ವ ಅಮಾಯಕ ಯುವಕನ ಸಾವಿಗೆ ಕಾರಣವೇನು ಎಂಬುದು ಸಿಬಿಐ ತನಿಖೆಯಿಂದ ಹೊರಬರಬೇಕಿದೆ. ಇದರ ಮದ್ಯ ಕೊಲೆಗೆ ಆರೋಪಿ ನಂ.1 ನನ್ನು ಬಿಜೆಪಿ ಪಕ್ಷವೇ ಜಿಲ್ಲಾ ವಕ್ಪ ಬೋರ್ಡ್ ಗೆ ಉಪಾಧ್ಯಕ್ಷ ಸ್ಥಾನ ನೀಡಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಧಾನ ಮೂಡುವಂತೆ ಮಾಡಿದೆ..


























