ಉಪ್ಪಿನಂಗಡಿ: ಸರಕಾರಿ ಮೀಸಲು ರಕ್ಷಿತಾರಣ್ಯದಿಂದ ಮರ ಕಡಿದು ಅಲ್ಲೇ ತುಂಡುಗಳನ್ನಾಗಿ ಮಾಡಿ ಸಾಗಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದು, ಬೆಲೆಬಾಳುವ ದಿಮ್ಮಿ ಸಹಿತ ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಉಪ್ಪಿನಂಗಡಿ ಸಮೀಪದ ಕಣಿಯೂರು ಗ್ರಾಮದ ಮಲೆಂಗಲ್ಲು ಎಂಬಲ್ಲಿನ ಸರಕಾರಿ ಮೀಸಲು ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಕಲ್ಬಾಜಿ ಮರವನ್ನು ಕಡಿಯುತ್ತಿರುವ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಮರದ ದಿಮ್ಮಿ ಸಮೇತ 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪದ್ಮುಂಜ ನಿವಾಸಿಗಳಾದ ದಿನೇಶ್, ಉಮೇಶ ಗೌಡ, ಹೇಮಂತ್ ಬಂಧಿತ ಆರೋಪಿಗಳು.
ಆರೋಪಿಗಳು ಮರವನ್ನು ಯಂತ್ರದ ಮೂಲಕ ಉರುಳಿಸಿ ಹಾಕಿದ್ದು, ಬಳಿಕ ಕಾಡಿನ ಒಳಗಡೆಯೇ ಅವುಗಳನ್ನು ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಲು ತಯಾರಿ ನಡೆಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಯಂತ್ರಗಳ ಸಹಿತ ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿ ಬಿ. ಜೆರಾಲ್ಡ್ ಡಿ’ಸೋಜ, ಅರಣ್ಯ ರಕ್ಷಕ ಜಗದೀಶ ಕೆ.ಎನ್., ಎಂ.ಎಂ. ಜಗದೀಶ, ಅರಣ್ಯ ವೀಕ್ಷಕ ರವಿ, ಬಿ. ಸೇಸಪ್ಪ ಗೌಡ ಭಾಗವಹಿಸಿದ್ದರು.

























