ಉಡುಪಿ: ಜಿಲ್ಲೆಯ ಕುಚ್ಚೂರು ಗ್ರಾಮದ ಪುಟ್ಟ ಬಾಲಕಿ ಸಾನ್ವಿ, ತಲಸೆಮಿಯಾ ಮೆಜರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಬೋನ್ ಮ್ಯಾರೋವ್ ಎನ್ನುವ ಚಿಕಿತ್ಸೆಗಾಗಿ 40 ಲಕ್ಷ ಹಣದ ಅವಶ್ಯಕತೆಯಿದ್ದು, ಇದನ್ನು ಅರಿತ ‘ರವಿ ಕಟಪಾಡಿ’ ಮತ್ತು ‘ಖ್ಯಾತ ಯೂಟ್ಯೂಬರ್ ಸಚಿನ್ ಶೆಟ್ಟಿ ಹಾಗೂ ತಂಡ’ ಅಷ್ಟಮಿಯ ದಿನ ವೇಷ ಧರಿಸಿ ಮಗುವಿನ ಚಿಕಿತ್ಸೆಗೆ ಸಹಾಯಧನವನ್ನು ನೀಡಿದ್ದಾರೆ.

ಬಡವರ ಕಂಡು ಮನ ಮಿಡಿಯುವ ಕಟಪಾಡಿಯ ರವಿಯವರು ಈ ವರ್ಷದ ಅಷ್ಟಮಿಗೆ ಮತ್ತೊಂದು ದೈತ್ಯ ವಿಭಿನ್ನ ವೇಷ ಹಾಕಿದ್ದು, ತನ್ನದು ಕಷ್ಟದ ಜೀವನವಾಗಿದ್ದರೂ, ತನಗಿಂತ ಮಿಗಿಲಾಗಿ ಅನೇಕರು ಸಂಕಷ್ಟದಲ್ಲಿರುವುದನ್ನು ಅರಿತುಕೊಂಡಿರುವ ಸಮಾಜ ಸೇವೆಗೆ ಮುಂದಾಗಿದ್ದಾರೆ. ಪ್ರತೀ ಅಷ್ಟಮಿಗೆ ರವಿ ದೇಹ ದಂಡಿಸುತ್ತಾರೆ. ಅನಾರೋಗ್ಯದ ಮಕ್ಕಳಿಗೆ ನೆರವಾಗುತ್ತಾರೆ.

ಕಳೆದ 7 ವರ್ಷಗಳಿಂದ ಹಲವಾರು ವೇಷಗಳಲ್ಲಿ ಜನರ ಗಮನ ಸೆಳೆಯುವುದರೊಂದಿಗೆ ಬೃಹತ್ ಮೊತ್ತದ ದೇಣಿಗೆ ಸಂಗ್ರಹವಾಗಿದೆ. ಬರೋಬ್ಬರಿ 90 ಲಕ್ಷ ರೂ. ಸಂಗ್ರಹವಾಗಿದ್ದು, ತನಗಾಗಿ ಒಂದಿಷ್ಟು ಉಳಿಸದೆ ಎಲ್ಲವನ್ನು ಚಿಕಿತ್ಸೆಯ ನೆರವಿಗಾಗಿಯೇ ಹಂಚಿರುವುದು ರವಿಯವರ ಹೃದಯ ವೈಷಾಲ್ಯತೆಗೆ ಸಾಕ್ಷಿಯಾಗಿದೆ.

ಅದೇ ರೀತಿ ಈ ಬಾರಿ ಶಟರ್ ಬಾಕ್ಸ್ ಖ್ಯಾತಿಯ ಯೂಟ್ಯೂಬರ್ ಸಚಿನ್ ಶೆಟ್ಟಿ ಮತ್ತು ತಂಡ ಅಷ್ಟಮಿಯಂದು ವೇಷ ಧರಿಸಿದ್ದಾರೆ. ಅಚ್ಚರಿಯ ಸಂಗತಿ ಏನಂದ್ರೆ ಒಂದೇ ದಿನ ವೇಷ ಹಾಕಿ ಸಂಗ್ರಹಿಸಿದ ಮೊತ್ತ ಹಾಗೂ ಸಹಾಯಕ್ಕಾಗಿ ತನ್ನ ಖಾತೆಗೆ ಬಂದ ಹಣ ಸೇರಿ ಒಟ್ಟು 10,51,418 ಸಂಗ್ರಹವಾಗಿತ್ತು. ಸಚಿನ್ ಶೆಟ್ಟಿ ಮತ್ತು ಅವರ ತಂಡ, ಸಾರ್ವಜನಿಕರಿಂದ ಬಂದಂತಹ ಎಲ್ಲಾ ಮೊತ್ತವನ್ನು ಬಾಲಕಿ ಸಾನ್ವಿ ಮನೆಗೆ ತೆರಳಿ ಹಸ್ತಾಂತರಿಸಿದ್ದಾರೆ. ಜೊತೆಗೆ ಇನ್ನಿತರ ಸಂಘ ಸಂಸ್ಥೆಗಳು ಕೂಡ ತಮ್ಮ ಕೈಲಾದಷ್ಟು ಮೊತ್ತವನ್ನು ನೀಡಿದ್ದಾರೆ.


ಇನ್ನೂ ಸುಮಾರು ಹದಿನೈದು ಲಕ್ಷದ ವರೆಗೆ ಹಣದ ಸಂಗ್ರಹವಾಗ ಬೇಕಾಗಿದೆ. ಇಬ್ಬರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಇವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

























