ಸುಳ್ಯ: ಕಾಲೇಜಿನಲ್ಲಿ ಜೊತೆಯಾಗಿದ್ದ ಅನ್ಯಕೋಮಿನ ಯುವಕ-ಯುವತಿಯನ್ನು ಪತ್ತೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಅದೇ ಕಾಲೇಜಿನ ಏಳು ಜನರ ವಿರುದ್ಧ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಯುವಕ ಮಹಮ್ಮದ್ ಸನೀಫ್(19) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ದೀಕ್ಷಿತ್, ಧನುಷ್, ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್, ಗೌತಮ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಸನೀಫ್ ಸುಳ್ಯ ತಾಲೂಕು ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ,ಕಾಂ ಪದವಿಯನ್ನು ಓದುತ್ತಿದ್ದು, ಅದೇ ಕಾಲೇಜಿನ ಯುವತಿಯೋರ್ವಳು ಆತನ ಸ್ನೇಹಿತೆಯಾಗಿದ್ದು, ಅವಳ ಒಟ್ಟಿಗೆ ಮಾತನಾಡುವುದನ್ನು ಕೆಲವರಿಗೆ ಇಷ್ಟವಿಲ್ಲದ ಕಾರಣ ಆ. 30 ರಂದು ಸನೀಫ್ ಕ್ಲಾಸ್ ರೂಂ ನಲ್ಲಿರುವಾಗ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದ ದೀಕ್ಷಿತ್ ಮತ್ತು ಧನುಷ್ ಎಂಬವರು ಕ್ಲಾಸ್ ನಿಂದ ಆತನನ್ನು ಮಾತನಾಡಲಿಕೆಯಿದೆ ಎಂದು ಹೇಳಿ ಕಾಲೇಜಿನ ಗ್ರೌಂಡ್ ಗೆ ಕರೆದುಕೊಂಡು ಹೋಗಿ ಅಲ್ಲೇ ಇದ್ದ ಅದೇ ಕಾಲೇಜಿನ ಇತರ ವಿದ್ಯಾರ್ಥಿಗಳಾದ ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್ ಹಾಗೂ ಸುಳ್ಯದ ಎನ್ ಎಂಸಿ ಕಾಲೇಜಿನ ಗೌತಮ್ ಮತ್ತು ಇತರರು ಕಲರ್ ಪಟ್ಟಿ ಹಿಡಿದು ನೀನು ಯುವತಿಯ ಒಟ್ಟಿಗೆ ಯಾಕೆ ಮಾತನಾಡುತ್ತಿಯಾ..!!? ಎಂದು ಹೇಳುತ್ತಾ, ಅವರ ಕೈಯಲ್ಲಿದ್ದ ದೊಣ್ಣೆಯಿಂದ ಸನೀಫ್ ಬೆನ್ನಿಗೆ ಹೊಡೆದು ನೆಲಕ್ಕೆ ದೂಡಿಹಾಕಿ ಕಾಲಿನಿಂದ ತುಳಿದು ಇನ್ನೂ ಮುಂದಕ್ಕೆ ಯುವತಿಯೊಂದಿಗೆ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ,ಕ್ರ 96/22 ಕಲಂ 143.147.148.323.324.506. ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

























