ಚಂದನವನದ ಯಶಸ್ವಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಅವರ ಪ್ರತಿಭೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಅವರು ನಟಿಸಿ, ನಿರ್ದೇಶನ ಮಾಡಿರುವ ‘ಕಾಂತರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಕರಾವಳಿ ನೆಲೆದ ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮಾಡಿರುವ ಪಾತ್ರ ಎಲ್ಲರನ್ನೂ ಸೆಳೆಯುತ್ತಿದೆ. ಸತತ 6ನೇ ದಿನವೂ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದು ಸಂತಸದ ವಿಷಯ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಈ ಚಿತ್ರದಿಂದ ಭರ್ಜರಿ ಲಾಭ ಆಗುತ್ತಿದೆ.

ಸೆಪ್ಟೆಂಬರ್ 30ರಂದು ‘ಕಾಂತಾರ’ ಚಿತ್ರ ಬಿಡುಗಡೆ ಆಯಿತು. ಅದಕ್ಕೂ ಒಂದು ದಿನ ಮುನ್ನ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಮಾಡಲಾಗಿತ್ತು. ಆ ಶೋಗಳು ಕೂಡ ಹೌಸ್ಫುಲ್ ಪ್ರದರ್ಶನ ಕಂಡಿದ್ದವು. ಅದನ್ನೂ ಸೇರಿಸಿದರೆ ಒಟ್ಟು 7 ದಿನಗಳ ಕಾಲ ಹೌಸ್ಫುಲ್ ಆದಂತೆ ಆಗಲಿದೆ. ವೀಕೆಂಡ್ನಲ್ಲಿ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡಿದ್ದಾರೆ. ದಸರಾ ಹಬ್ಬದ ರಜಾ ದಿನಗಳು ಬಂದಿರುವುದು ಕೂಡ ಪ್ಲಸ್ ಪಾಯಿಂಟ್ ಆಗಿದೆ.
ಮೊದಲ ದಿನ ‘ಕಾಂತಾರ’ ಸಿನಿಮಾ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಯ್ತು. ರಿಷಬ್ ಶೆಟ್ಟಿ ಅವರ ನಟನೆಯನ್ನು ಎಲ್ಲರೂ ಕೊಂಡಾಡಿದರು. ರಕ್ಷಿತ್ ಶೆಟ್ಟಿ, ರಮ್ಯಾ, ಪ್ರಭಾಸ್ ಮುಂತಾದ ಸ್ಟಾರ್ ಕಲಾವಿದರು ಭೇಷ್ ಎಂದರು. ಎಲ್ಲದರ ಪರಿಣಾಮವಾಗಿ ‘ಕಾಂತಾರ’ ಚಿತ್ರಕ್ಕೆ ಉತ್ತಮ ಹೈಪ್ ಸಿಕ್ಕಿತು. ಮುಖ್ಯವಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ಈ ಚಿತ್ರ ಆಕರ್ಷಿಸುತ್ತಿದೆ.
‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಸಪ್ತಮಿ ಗೌಡ ಅವರು ನಾಯಕಿಯಾಗಿ ನಟಿಸಿದ್ದಾರೆ. ಅರಣ್ಯಾಧಿಕಾರಿ ಪಾತ್ರದಲ್ಲಿ ಕಿಶೋರ್ ಅಬ್ಬರಿಸಿದ್ದಾರೆ. ಅಚ್ಯುತ್ ಕುಮಾರ್ ಮಾಡಿರುವ ಪಾತ್ರ ಕೂಡ ಹೆಚ್ಚು ಹೈಲೈಟ್ ಆಗಿದೆ. ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್ ಮುಂತಾದವರು ಸಹ ಶೈನ್ ಆಗಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ.
























