ಪುತ್ತೂರು: ಬಿಜೆಪಿ ನಗರ ಮಂಡಲದ ವಿಶೇಷ ಕಾರ್ಯನಿರ್ವಹಣಾ ತಂಡದ ಸಭೆಯು ಅ.27 ರಂದು ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಶಾಸಕ ಸಂಜೀವ ಮಠಂದೂರು, ಪಕ್ಷ ಸಂಘಟನೆ ಮತ್ತು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.

ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ರವರು ಮಾತನಾಡಿ, ನಗರ ಸಭೆ ಅಧಿಕಾರಕ್ಕೆ ಬಂದು ನ.2 ಕ್ಕೆ ಎರಡು ವರ್ಷ ತುಂಬುವ ಶುಭ ಸಂದರ್ಭದಲ್ಲಿ ಹಾರಾಡಿ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಗೆ ಶಿಲಾನ್ಯಾಸ, ಮೊದಲಾದ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.

ಪಕ್ಷದ ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ, ಮುಂದಿನ ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಯನ್ನು ಅಭೂತಪೂರ್ವವಾಗಿ ಜಯಿಸಲು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಕಾರ್ಯತಂತ್ರಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆಯವರು ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಡಲ ಪ್ರ.ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಸ್ವಾಗತಿಸಿ , ಜಯಶ್ರೀ ಎಸ್ ಶೆಟ್ಟಿಯವರು ವಂದಿಸಿದರು. ನಗರ ಸಭಾ ಸದಸ್ಯೆ ಗೌರೀ ಬನ್ನೂರು ಪ್ರಾರ್ಥನೆ, ಹಾಗೂ ಮಂಡಲ ಉಪಾಧ್ಯಕ್ಷೆ ಜ್ಯೋತಿ ಆರ್ ನಾಯಕ್ ಪಕ್ಷದ ಗೀತೆಯನ್ನು ಹಾಡಿದರು. ಮಂಡಲ ಉಪಾಧ್ಯಕ್ಷ ಇಂದುಶೇಖರ್ ಕಾರ್ಯಕ್ರಮ ನಿರ್ವಹಿಸಿದರು. ಪೂಡಾ ಅಧ್ಯಕ್ಷ ಭಾಮಿ ಅಶೊಕ್ ಶೆಣೈ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಮಂಡಲ ಪದಾಧಿಕಾರಿಗಳು, ಸಮಿತಿ ಸದಸ್ಯರು, ಮಹಾಶಕ್ತಿಕೇಂದ್ರ – ಶಕ್ತಿಕೇಂದ್ರ ಪ್ರಮುಖರು,ನಗರ ಸಭಾ ಸದಸ್ಯರು,ಜಿಲ್ಲಾ ಸಮಿತಿ ಸದಸ್ಯರು, ವಿವಿಧ ಮೋರ್ಚಾ- ಪ್ರಕೋಷ್ಠಗಳ ಪ್ರಮುಖರು, ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.


























