ಬಂಟ್ವಾಳ: ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ದಿ.ಕೊಡಾಜೆ ಬಾಬು ಆಳ್ವ ರವರು ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡು, ತನ್ನ ಭಾಷಾ ಪ್ರೌಢಿಮೆಯೊಂದಿಗೆ ಸ್ಥಳೀಯ ಕೂಟಗಳಲ್ಲಿ ಅರ್ಥದಾರಿಯಾಗಿ, ವೇಷಧಾರಿಯಾಗಿ ಖ್ಯಾತಿಯನ್ನು ಪಡೆದಿದ್ದರು ಎಂದು ಮಾಣಿ ಯಕ್ಷಗಾನ ಸಮಿತಿಯ ಸದಸ್ಯ ಕೆ.ವಿ.ರಮಣ್ ಹೇಳಿದರು.

ಯಕ್ಷಗಾನ ಸಮಿತಿ ಮಾಣಿ ಇದರ ಆಶ್ರಯದಲ್ಲಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಜರುಗಿದ 39ನೇ ವರ್ಷದ ತಾಳಮದ್ದಲೆ ಕೂಟದಲ್ಲಿ ದಿ.ಬಾಬು ಆಳ್ವ ರವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತಿ, ಮತ, ಧರ್ಮಗಳ ವ್ಯತ್ಯಾಸವಿಲ್ಲದೇ ಎಲ್ಲರ ಜೊತೆ ಸಮಾನವಾಗಿ ಬೆರೆಯುತ್ತಿದ್ದ ಬಾಬು ಆಳ್ವರವರು ಅಬಲೆಯರ ಪಾಲಿನ ಆಶಾಕಿರಣವಾಗಿದ್ದರು. ಊರಿನ ಶಿಕ್ಷಣ ಹಾಗೂ ಸಹಕಾರಿ ಸಂಸ್ಥೆಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಅವರು, ಗೌರವಾನ್ವಿತರಾಗಿ, ತನ್ನ ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಲೆಕ್ಕ ಪರಿಶೋಧಕ ಶಿವಾನಂದ ಪೈ ಕಾರ್ಕಳ, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಕೆದಿಕಂಡೆಗುತ್ತು ಜಯಂತ ಶೆಟ್ಟಿ, ಉದ್ಯಮಿ ಪಡ್ಯಾರಮನೆ ನಾರಾಯಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಸಮಿತಿಯ ಅಧ್ಯಕ್ಷ ಮೋಹನ ಪೈ ಮಾಣಿ ಸ್ವಾಗತಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಆಳ್ವ ಕೊಡಾಜೆ ವಂದಿಸಿದರು.

ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಶರಸೇತು ಬಂಧನ ತಾಳಮದ್ದಲೆ ಕೂಟ ಜರುಗಿತು.


