ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬದವರಿಗೆ ದ.ಕ., ಉಡುಪಿ ಬಿಲ್ಲವ ಪ್ರಮುಖರು 45 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುತ್ತೇವೆ ಎಂದು ಹೇಳಿದ್ದು, ಇದೀಗ ಅವಕಾಶ ಇಲ್ಲದ ನಿಟ್ಟಿನಲ್ಲಿ ಇದೇ ಹಣದಿಂದ ಪ್ರವೀಣ್ ನೆಟ್ಟಾರು ಸ್ಮರಣಾರ್ಥ ದ.ಕ., ಉಡುಪಿ ವಿಧಾನಸಭಾ ಕ್ಷೇತ್ರದ 14 ಮಂದಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬಿಲ್ಲವ ಮುಖಂಡ ಜಯಂತ ನಡುಬೈಲು ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಬಳಿಕ ಅವರಿಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಈ ಕುರಿತು ಅವರ ಕುಟುಂಬದವರಿಗೆ ಮನೆ ನಿರ್ಮಿಸುವ ಭರವಸೆ ನೀಡಲಾಗಿತ್ತು. ಅಲ್ಲದೆ ಈ ಸಂದರ್ಭದಲ್ಲಿ ಮನೆಯ 3ಡಿ ವಿನ್ಯಾಸದ ಜತೆ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂ. ಮುಂಗಡ ಹಣವನ್ನು ಪ್ರವೀಣ್ ನೆಟ್ಟಾರು ಅವರ ಕುಟುಂಬದವರ ಮೂಲಕ ಗುತ್ತಿಗೆದಾರರಿಗೆ ನೀಡಲಾಗಿತ್ತು. ಈ ನಡುವೆ ಬಿಜೆಪಿ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಇದಕ್ಕೆ ಭೂಮಿ ಪೂಜೆಯು ನಡೆದಿದೆ. ಈ ವಿಚಾರ ಸ್ವಾಗತಾರ್ಹವಾಗಿದ್ದು, ಈ ವಿಚಾರವನ್ನು ಸಂಸದವರು ಬಿಲ್ಲವ ಮುಖಂಡರ ಜತೆ ಚರ್ಚಿಸಿ ಈ ವಿಚಾರಕ್ಕೆ ಇಳಿಯಬೇಕಿತ್ತು ಎಂಬುದು ಬಿಲ್ಲವ ಮುಖಂಡರಿಂದ ಅಭಿಪ್ರಾಯವ್ಯಕ್ತವಾಗಿದ್ದು, ಈ ಕುರಿತು ನಮ್ಮ ಯಾವುದೇ ವಿರೋಧವಿಲ್ಲ. ಅದಾದ ಬಳಿಕ ಗುತ್ತಿಗೆದಾರರಿಗೆ ನೀಡಿದ ಏಳು ಲಕ್ಷವನ್ನು ನಾವು ಹಿಂಪಡೆದಿದ್ದೇವೆ ಎಂದು ತಿಳಿಸಿದರು.
ಇದೀಗ ನೆಟ್ಟಾರು ಕುಟುಂಬಕ್ಕೆ ಮನೆ ನಿರ್ಮಿಸಲು ಬಳಸುವ 45 ಲಕ್ಷ ರೂ.ನಲ್ಲಿ ತಲಾ ಐದು ಲಕ್ಷ ರೂ. ವೆಚ್ಚದಲ್ಲಿ 14 ಮನೆ ನಿರ್ಮಿಸಿ ಕೊಡುವ ಯೋಜನೆಯಿದ್ದು, ಇದೀಗ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ತಾಲೂಕಿನ ಪುಣಚ ಗ್ರಾಮದ ನಿವಾಸಿ ಚಂದ್ರಾವತಿ ಹಾಗೂ ಬಂಟ್ವಾಳ ಸಜಿಪಮೂಡ ನಿವಾಸಿ ಸುಂದರಿ ಅವರ ಕುಟುಂಬಕ್ಕೆ ಮೊದಲ ಹಂತದಲ್ಲಿ ಮನೆ ನಿರ್ಮಣವಾಗಲಿದ್ದು, ಕಾಮಗಾರಿಯನ್ನು ಮುಂದಿನ ವಾರದಲ್ಲಿ ಹಮ್ಮಿಕೊಳ್ಳಲಾಗುವುದು. ಉಳಿದ 12 ಮನೆಗಳನ್ನು ಬಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಉಲ್ಲಾಸ್ ಕೋಟ್ಯಾನ್, ಅವಿನಾಶ್ ಸುವರ್ಣ ಮಂಗಳೂರು, ಮೋಹನ್ದಾಸ್ ಬಂಗೇರ, ಕಿಶನ್ ಅಮಿನ್ ಉಪಸ್ಥಿತರಿದ್ದರು.


























