ಮಂಗಳೂರು: ಕನ್ನಡದ ಸೂಪರ್ ಹಿಟ್ ಹಾಗೂ ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾದಲ್ಲಿ ನಲಿಕೆ, ಪಂಬದ, ಪರವ ಸಮುದಾಯವನ್ನು ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದಲಿತ ಸಂಘಟನೆಗಳು ಮನವಿ ಮಾಡಿವೆ.
ಚಿತ್ರದಲ್ಲಿ ಹುಡುಗರು ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ನರ್ತಕ ಕುಟುಂಬದಲ್ಲಿ ಆ ರೀತಿಯ ಕೆಟ್ಟ ಶಬ್ಧ ಬಳಕೆ ಮಾಡುವುದಿಲ್ಲ. ಊರಿನ ಯಜಮಾನ ಗಂಡ ಸತ್ತವರಿಗೆ ನಾನೇ ಇದ್ದೇನೆ ಅಂತಾ ಹೇಳುವುದು ದುಃಖ ತಂದಿದೆ. ಧಣಿ ಬಡ ಹೆಣ್ಣು ಮಗಳ ಮನೆಗೆ ಹೋಗುವಾಗ ಹೀರೋ ಕಾವಲು ಕಾಯುತ್ತಾನೆ. ಅದನ್ನು ವಿಜೃಂಭಣೆ ಮಾಡುವ ನಾವು ಇಂತಹ ಕೀಳು ಮಟ್ಟಕ್ಕೆ ಹೋಗಿದ್ದೇವೆ. ಹೊರದೇಶದಲ್ಲಿ ಇದನ್ನು ಭಾರತದ ಸಂಸ್ಕೃತಿ ಅಂತಾ ಹೇಳುವುದು ದುರಂತ ಎಂದು ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಹೇಳಿದ್ದಾರೆ.
ವ್ಯಕ್ತಗತವಾಗಿ ರಿಷಬ್ ಶೆಟ್ಟಿ ಒಳ್ಳೆಯವರು, ಆದರೆ ಚಿತ್ರವನ್ನು ಕಾನೂನು ಚೌಕಟ್ಟಿನಲ್ಲಿ ನೋಡಬೇಕಾಗುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಮನವಿ ಮಾಡುತ್ತೇವೆ. ಸಿನಿಮಾವು ಹಿಂಸೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ ಆಕ್ಷೇಪಾರ್ಹ ಸೀಸ್ಗೆ ಕತ್ತರಿ ಹಾಕಬೇಕು. ಗುಳಿಗ ಕಾಂತಾರ ಚಿತ್ರದಲ್ಲಿ ಇರುವ ರೀತಿಯೇ ಬೇಕು ಎನ್ನುವ ಬೇಡಿಕೆಯೂ ಬರುತ್ತಿದೆ. ಆರಾಧಾನಾ ಕ್ರಮವನ್ನು ವಿಕೃತಿಗೊಳಿಸುತ್ತಿದೆ. ಸೆನ್ಸಾರ್ ಮಂಡಳಿ ಕಾನೂನು ಚೌಕಟ್ಟಿನಲ್ಲಿ ಆ ಚಿತ್ರವನ್ನು ನೋಡಬೇಕಿತ್ತು. ಆ ಚಿತ್ರಕ್ಕೆ ಸೆನ್ಸಾರ್ ಒಂದು ಕಟ್ ಕೂಡಾ ಮಾಡಿಲ್ಲ ಅನ್ನೋದನ್ನು ರಿಷಬ್ ಶೆಟ್ಟಿ ಹೇಳಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಸೆನ್ಸಾರ್ ಮಂಡಳಿ ಪರಿಶೀಲನೆ ಮಾಡಬೇಕು ಎಂದು ದಲಿತ ಸಂಘಟನೆಗಳು ಜಿಲ್ಲಾಡಳಿತಕ್ಕೆ ಒತ್ತಾಯಿಸಿವೆ.
ಸಿನಿಮಾದಲ್ಲಿ ಕೆಳ ಸಮುದಾಯದ ಯುವಕರನ್ನು ಪೋಲಿ ಹುಡುಗರ ರೀತಿ ಚಿತ್ರಿಸಲಾಗಿದೆ. ಹಣ ಹೆಂಡ ಕೊಟ್ಟರೆ ಏನು ಬೇಕಾದರೂ ಮಾಡುತ್ತಾರೆ ಎಂದು ಚಿತ್ರಿಸಲಾಗಿದೆ. ದೈವ ನರ್ತಕರು ಕೂಡ ನಮ್ಮ ಜೊತೆ ನೋವು ತೋಡಿಕೊಂಡಿದ್ದಾರೆ. ಅದನ್ನು ಸಮಾಜದ ಮುಂದೆ ಹೇಳಿದರೆ ಉದ್ಯೋಗ ನಷ್ಟವಾಗುವ ಭೀತಿ ವ್ಯಕ್ತಪಡಿಸಿದ್ದಾರೆ. ದಲಿತರಷ್ಟೇ ಅಲ್ಲ ದೈವ ನರ್ತಕರ ಕುಟುಂಬಗಳನ್ನೂ ಅವಹೇಳನ ಮಾಡಲಾಗಿದೆ. ಸೆನ್ಸಾರ್ ಮಂಡಳಿ ಮತ್ತೆ ಕಾಂತಾರ ಚಿತ್ರವನ್ನು ಪರಿಶೀಲನೆ ಮಾಡಬೇಕು ಎಂದು ಲೋಲಾಕ್ಷ ಅವರು ಆಗ್ರಹಿಸಿದ್ದಾರೆ.
ದಲಿತ ಸಂಘಟನೆಗಳ ಆರೋಪಗಳೇನು..!!??
- ದೈವ ನರ್ತಕನ ತಾಯಿಯ ಬಾಯಿಯಲ್ಲಿ ಅಸಂವಿಧಾನಿಕ ಪದವನ್ನು ಬಳಸಲಾಗಿದೆ
- ಊರಿನ ಯಜಮಾನ ಗಂಡ ಸತ್ತವರಿಗೆ ನಾನೇ ಇದ್ದೇನೆ ಅಂತಾ ಹೇಳೋದು ದುಃಖ ತಂದಿದೆ
- ಧಣಿ ಬಡ ಹೆಣ್ಣು ಮಗಳ ಮನೆಗೆ ಹೋಗುವಾಗ ಹೀರೋ ಕಾವಲು ಕಾಯುವುದು, ಅದನ್ನು ವಿಜೃಂಭಣೆ ಮಾಡುವ ನಾವು ಇಂತಹ ಕೀಳು ಮಟ್ಟಕ್ಕೆ ಹೋಗಿದ್ದೇವೆ.
- ಹೊರದೇಶದಲ್ಲಿ ಇದನ್ನು ಭಾರತದ ಸಂಸ್ಕೃತಿ ಅಂತಾ ಹೇಳುವುದು ದುರಂತ
- ಗುಳಿಗ ಕಾಂತಾರ ಚಿತ್ರದಲ್ಲಿ ಇರುವ ರೀತಿಯೇ ಬೇಕು ಎನ್ನುವ ಬೇಡಿಕೆಯೂ ಬರುತ್ತಿದೆ.
- ಆರಾಧಾನಾ ಕ್ರಮವನ್ನು ವಿಕೃತಿಗೊಳಿಸುತ್ತಿದೆ.
- ಚಿತ್ರದಲ್ಲಿ ದೈವಾರಾಧನೆಯಲ್ಲಿ ಹಿಂಸೆಗೆ ಪ್ರಚೋದನೆ ನೀಡಲಾಗಿದೆ.


























