ಶಬರಿಮಲೆಯ ಅಯ್ಯಪ್ಪ ದೇಗುಲವು ಬುಧವಾರದಿಂದ (ನ.16) ತೆರೆಯಲಿದ್ದು, ಗುರುವಾರದಿಂದ (ನ.17) ಎರಡು ತಿಂಗಳ ಅವಧಿಗೆ ಭಕ್ತರ ದರ್ಶನಕ್ಕೆ ಅವಕಾಶ ಇರಲಿದೆ.
ವಾರ್ಷಿಕ ಮಂಡಲಂ-ಮಕರವಿಳುಕ್ಕು ಯಾತ್ರೆಗೂ ನಾಳೆಯಿಂದಲೇ ಚಾಲನೆ ಸಿಗಲಿದೆ. ದೇಗುಲದ ಹಾಲಿ ಪ್ರಧಾನ ಅರ್ಚಕರಾದ (ತಂತ್ರಿ) ಕಂಡರಾರು ರಾಜೀವರು ಮತ್ತು ಪ್ರಧಾನ ಅರ್ಚಕರಾದ ಎನ್.ಪರಮೇಶ್ವರನ್ ನಂಬೂದಿರಿ ಅವರ ಸಮಕ್ಷಮದಲ್ಲಿ ದೇಗುಲದ ಗರ್ಭಗೃಹವನ್ನು ಇಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ನಂತರ ಅಯ್ಯಪ್ಪ ಮತ್ತು ಮಲಿಕಾಪುರಮ್ ದೇಗುಲಗಳ ಮುಖ್ಯ ಅರ್ಚಕರು ಪೂಜಾ ವಿಧಿಗಳನ್ನು ಆರಂಭಿಸುವ ಮೂಲಕ ಜವಾಬ್ದಾರಿಯನ್ನು ಸ್ವೀಕರಿಸಲಿದ್ದಾರೆ. 41 ದಿನಗಳ ಮಂಡಲ ಪೂಜಾ ವಿಧಿಗಳು ಡಿ. 27ಕ್ಕೆ ಮುಕ್ತಾಯವಾಗಲಿದೆ. ನಂತರ ಮೂರು ದಿನಗಳ ಕಾಲ ದೇಗುಲದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಕರಾವಳಿಯಾದ್ಯಂತ ಕಾರ್ತಿಕ ಮಾಸದ ಸಂಕ್ರಮಣದಂದು (ಬುಧವಾರ) ಭಕ್ತರು ಮಾಲೆಯನ್ನು ಹಾಕುತ್ತಾರೆ. ಡಿ. 27ರಂದು ಮಂಡಲ ಪೂಜೆ ನಡೆಯಲಿದ್ದು. ಬಳಿಕ ಇನ್ನೊಂದಾವರ್ತಿಯಲ್ಲಿ ಮಕರಸಂಕ್ರಮಣ ದರ್ಶನಕ್ಕೆ ತೆರೆಯಲಾಗುತ್ತದೆ. ಡಿಸೆಂಬರ್ ಮೊದಲೆರಡು ವಾರಗಳಲ್ಲಿಯೂ ವಿವಿಧೆಡೆ ಶಿಬಿರಗಳ ಮೂಲಕ ಮಾಲೆ ಧರಿಸುತ್ತಾರೆ.
ಚೆಂಗನ್ನೂರಿನಿಂದ ನೀಲಕಲ್ ವರೆಗೆ ಸ್ಪಾಟ್ ಬುಕಿಂಗ್ ಮಾಡುವ 12 ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 15 ಆಸನಗಳಿಗಿಂತ ಕಡಿಮೆ ಇರುವ ವಾಹನಗಳಿಗೆ ಪಂಪೆ ವರೆಗೆ ಹೋಗಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯದ ವಾಹನಗಳಿಗೆ ನೀಲಕಲ್ ವರೆಗೆ ಮಾತ್ರ ಪ್ರವೇಶವಿದೆ. ಅಲ್ಲಿ ಭಕ್ತರು ಇಳಿದು ಸರಕಾರಿ ಬಸ್ಗಳಲ್ಲಿ ತೆರಳಬೇಕು. ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಡಿ.30 ರಿಂದ ಮಕರವಿಳುಕ್ಕು ಯಾತ್ರೆಗಾಗಿ ದೇಗುಲವನ್ನು ಮತ್ತೆ ತೆರೆಯಲಾಗುವುದು. ಜನವರಿ 14ರಂದು ಮಕರವಿಳಕ್ಕು ಕಾರ್ಯಕ್ರಮವಿದೆ. ಸಂಕ್ರಾಂತಿ ಜ್ಯೋತಿಯ ದರ್ಶನ ಮತ್ತಿತರರ ಪೂಜಾ ವಿಧಿಗಳ ನಂತರ ಜನವರಿ 20ರಂದು ದೇಗುಲವನ್ನು ಮುಚ್ಚಲಾಗುವುದು. ಅಲ್ಲಿಗೆ ಈ ವರ್ಷದ ಶಬರಿಮಲೆ ಯಾತ್ರೆ ಋತುಮಾನ ಮುಕ್ತಾಯವಾದಂತೆ ಆಗುತ್ತದೆ.
ಕೋವಿಡ್-19ರ ನಿರ್ಬಂಧದ ಕಾರಣ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿತ್ತು. ಈ ಬಾರಿ ನಿರ್ಬಂಧ ಸಡಿಲಿಸಿರುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳಬಹುದು ಎಂಬ ನಿರೀಕ್ಷೆಯಿದೆ. ಶಬರಿಮಲೆ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಸುಮಾರು 13,000 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಈ ವರ್ಷ ಯಾತ್ರಿಗಳಿಗೆ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಮಾತ್ರವೇ ಪ್ರವೇಶ ಇರಲಿದೆ. ಒಂದು ದಿನಕ್ಕೆ ಗರಿಷ್ಠ 1.2 ಲಕ್ಷ ಮಂದಿಗೆ ದರ್ಶನ ಸಿಗಲಿದೆ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.


























