ಬಂಟ್ವಾಳ: ಸಜೀಪನಡು ಗ್ರಾಮದ ನಿಶಾಭಾಗ್ ಮನೆಗೆ ನುಗ್ಗಿದ ಕಳ್ಳರು ಸುಮಾರು ಒಟ್ಟು 12.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ ಘಟನೆ ನಡೆದಿದೆ.
ಮನೆಯವರು ಡಿ. 13 ರಂದು ಮಧ್ಯಾಹ್ನ 2.30ರ ಸುಮಾರಿಗೆ ಸಂಬಂಧಿಕರ ಮನೆಗೆ ಹೋಗಿದ್ದು, ರಾತ್ರಿ 8.10 ರ ಸುಮಾರಿಗೆ ಹಿಂದಿರುಗಿ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
ನಜೀಬ್ ಅವರ ತಾಯಿ ಮಲಗುವ ಕೋಣೆಯಲ್ಲಿದ್ದ ಕಪಾಟಿನ ಸೇಫ್ ಲಾಕರನ್ನು ಆಯುಧದಿಂದ ಮೀಟಿ ಪರ್ಸ್ ನಲ್ಲಿದ್ದ 1.40 ಲಕ್ಷ ರೂ. ನಗದು, 3 ಪವನ್ ತೂಕದ 3 ಕೈ ಬಳೆಗಳು, ತಲಾ ಒಂದು ಪವನ್ ತೂಕದ 3 ಉಂಗುರಗಳು, 7 ಪವನ್ ತೂಕದ ಚಿನ್ನದ ಚೈನ್, ನಜೀಬ್ ಅವರ ಕೋಣೆಯ ಕಪಾಟಿನಲ್ಲಿದ್ದ ಸೇಫ್ ಲಾಕರ್ ಮುರಿದು 4 ಪವನ್ ತೂಕದ ಕೊರಳಿನ ಮಾಲೆ, 4 ಪವನ್ ತೂಕದ ಕೈ ಬಳೆ ಸಹಿತ ಇತರ ಚಿನ್ನಾಭರಣ ಸೇರಿ ಒಟ್ಟು 36 ಪವನ್ ತೂಕದ ಚಿನ್ನಾಭರಣ ಕಳವು ನಡೆಸಿದ್ದಾರೆ.
ಕಳ್ಳರು ಮನೆಯ ಮೇಲಿನ ಮಹಡಿಯ ಹಿಂಬದಿಯ ಬಾಗಿಲನ್ನು ಮುರಿದು ಒಳ ನುಗ್ಗಿದ್ದು, ಕಳವಾದ ಚಿನ್ನದ ಮೌಲ್ಯದ 11 ಲಕ್ಷ ರೂ., 1.40 ಲಕ್ಷ ರೂ. ನಗದು ಸೇರಿ ಒಟ್ಟು 12.40 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಿಶಾಭಾಗ್ ನಿವಾಸಿ, ಜಿ.ಪಂ.ಮಾಜಿ ಸದಸ್ಯ ಎಸ್.ಅಬ್ಬಾಸ್ ರವರ ಮನೆಯಲ್ಲಿ ಕಳ್ಳತನವಾಗಿದ್ದು, ಅವರ ಪುತ್ರ ಮೊಹಮ್ಮದ್ ನಜೀಬ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ..