ಮಂಗಳೂರು: ಬೆಂಗಳೂರಿನಿಂದ ಮಂಗಳೂರಿನ ನರಿಂಗಾನ ಗ್ರಾಮದ ತೌಡುಗೋಳಿ ಕಡೆ ಕಾರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2 ಲಕ್ಷ ರೂ. ಮೌಲ್ಯದ ಎಂಡಿಎಂಎ ಮತ್ತು ಗಾಂಜಾವನ್ನು ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪಿಎಸ್ಐ ಶರಣಪ್ಪ ಅವರ ತಂಡವು ಶನಿವಾರ ರಾತ್ರಿ ಬೋಳಿಯಾರ್ನಲ್ಲಿ ದಾಳಿ ನಡೆಸಿ ನಿಷೇಧಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮಾರುತಿ ಆಲ್ಟೊ ಕಾರು ಸಮೇತ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನರಿಂಗಾನ ಗ್ರಾಮದ ನಿವಾಸಿಗಳಾದ ಮೊಯ್ದಿನ್ ಹಫೀಜ್ (36) ಮಹಮ್ಮದ್ ಸಿರಾಜ್ (43) ಅಡ್ಯಾರ್ ಕಟ್ಟೆ,ವಳಚ್ಚಿಲ್ ನಿವಾಸಿ ಇಕ್ಬಾಲ್ (30) ಕೋಡಿಕಲ್, ಅಶೋಕ ನಗರ ನಿವಾಸಿ ಮಹಮದ್ ಅಝೀಜ್ (33) ಬಂಧಿತ ಆರೋಪಿಗಳು.
ಕೊಣಾಜೆ ಠಾಣಾ ಪಿ.ಎಸ್ಐ ಶರಣಪ್ಪ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್, ಪುರುಷೋತ್ತಮ್, ಶೈಲೇಂದ್ರ, ದೀಪಕ್, ಸುರೇಶ್, ಹೇಮಂತ್, ಗೌಸ್, ಅನಿಲ್, ಚಂದ್ರ ಕಾಂತ್, ಬರಮ ಬಡಿಗೇರ್ ಪಾಲ್ಗೊಂಡಿದ್ದರು.