ಹಾಸನ: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಪ್ರಕರಣವನ್ನು ಮರೆಯುವ ಮುನ್ನವೇ ಹಾಸನದ ಕೆ.ಆರ್.ಪುರಂ. ಬಡಾವಣೆಯಲ್ಲಿರುವ ಡಿಸಿಡಿಸಿಗೆ ಕೊರಿಯರ್ನಲ್ಲಿ ಬಂದಿದ್ದ ಮಿಕ್ಸಿಯೊಂದು ಸ್ಫೋಟಗೊಂಡು ಕೊರಿಯರ್ ಕಚೇರಿಯ ಮುಖ್ಯಸ್ಥ ಗಾಯಗೊಂಡಿರುವ ಪ್ರಕರಣ ಸೋಮವಾರ ಸಂಜೆ ಸಂಭವಿಸಿದೆ.

ಇದು ಸಮಾಜ ವಿರೋಧಿಗಳ ದುಷ್ಕೃತ್ಯವೇ ಅಥವಾ ಆಕಸ್ಮಿಕವೇ ಎಂಬುದರ ತನಿಖೆ ಆರಂಭವಾಗಿದ್ದು, ವಿಶೇಷ ಪೊಲೀಸ್ ತಂಡವು ಈ ಪ್ರಕರಣ ತನಿಖೆಯನ್ನು ಆರಂಭಿಸಿದೆ.

ಎರಡು ದಿನಗಳ ಹಿಂದೆ ಕೆ. ಆರ್.ಪುರಂ. ಬಡಾವಣೆಯಲ್ಲಿರುವ ಡಿಸಿಡಿಸಿಗೆ ಹಾಸನದ ವಿಳಾಸವೊಂದಕ್ಕೆ ಎರಡು ದಿನಗಳ ಹಿಂದೆ ಕೊರಿಯರ್ಗೆ ಒಂದು ಪಾರ್ಸೆಲ್ ಬಂದಿತ್ತು. ಆದರೆ, ವಿಳಾಸದಾರರು ನಾವು ಆರ್ಡರ್ ಮಾಡಿಲ್ಲ ಎಂದು ವಾಪಸ್ ಕಳುಹಿಸಿದ್ದರು. ಅದು ಡೆಲಿವರಿ ಆಗದೆ ವಾಪಸ್ ಕೊರಿಯರ್ ಕಚೇರಿಗೆ ಬಂದಿತ್ತು. ಅದು ಸೋಮವಾರ ಸಂಜೆ ಸ್ಫೋಟಗೊಂಡಿದ್ದು, ಕೊರಿಯರ್ ಏಜೆನ್ಸಿ ಮುಖ್ಯಸ್ಥ ಶಶಿ ಎಂಬವರು ಬಲಗೈಗೆ ತೀವ್ರವಾದ ಗಾಯವಾಗಿದೆ. ದೇಹದ ವಿವಿಧ ನಾಲ್ಕು ಭಾಗಕ್ಕೆ ಪೆಟ್ಟು ಬಿದ್ದಿದೆ. ಗಾಯಗೊಂಡಿರುವ ಶಶಿ ಅವರು ತಕ್ಷಣವೇ ಆಟೋವೊಂದರಲ್ಲಿ ಆಸ್ಪತ್ರೆಗೆ ಹೋಗಿ ಅವರು ದಾಖಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಎಸ್ಪಿ ಹರಿರಾಂ ಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಎಫ್ಎಸ್ಎಲ್ನವರು ಸ್ಥಳಕ್ಕೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ..
























