ಪುತ್ತೂರು: ಬೆಳಗಾವಿ ಅಧಿವೇಶನದಲ್ಲಿ ಗೃಹಸಚಿವರು ಅಡಿಕೆ ವಿಚಾರವಾಗಿ ಹೇಳಿರುವ ಹೇಳಿಕೆ ಬಗ್ಗೆ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ‘ಗೃಹ ಸಚಿವರು ಅಡಿಕೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸ್ಬೇಕು. ಅದು ಅಗತ್ಯವಿಲ್ಲ ಎಂಬ ರೀತಿ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಅಡಿಕೆ ಬೆಳೆಗಾರರಿಗೆ ಮಾಡಿದಂತಹ ಅವಮಾನವಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಬೆಳೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಎನ್ನುವ ಬದಲು ಅವರು ಅದಕ್ಕೆ ಯಾವ ರೀತಿ ಪರಿಹಾರ ನೀಡಬಹುದು ಎಂಬುದನ್ನು ಯೋಚಿಸಬೇಕಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಇಷ್ಟು ಸುಧಾರಿಸಲು, ಉನ್ನತ ಮಟ್ಟಕ್ಕೆ ಬರಲು, ಹಲವಾರು ವಿದ್ಯಾಸಂಸ್ಥೆಗಳು ಪ್ರಾರಂಭವಾಗಲು ಮೂಲ ಕಾರಣ ಅಡಿಕೆ. ಅಡಿಕೆಗೆ ಈಗ ಉತ್ತಮ ಬೆಲೆ ಇದೆ. ಈ ಬೆಲೆ ಕುಸಿಯುತ್ತದೆ ಎಂದು ಹೇಳಬೇಕಿದ್ರೆ ಕುಸಿಯುವುದಕ್ಕೆ ಕಾರಣ ಏನು ಎಂಬುದನ್ನು ಸರಕಾರ ಯೋಚಿಸಬೇಕಾಗಿದೆ. ಸಚಿವರು ಯಾಕೇ ಹಾಗೆ ಹೇಳಿದ್ರು ಅಂತ ಗೊತ್ತಿಲ್ಲ. ಮೊದಲು ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಅಡಿಕೆ ಹೆಚ್ಚಾಗಿ ಇತ್ತು. ಈಗ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ. ಅದಕ್ಕೆ ಸರಕಾರ ಆಮದು ಆಗುವ ಅಡಿಕೆಗಳನ್ನು ನಿಲ್ಲಿಸಿ, ನಮ್ಮಲ್ಲಿ ದೊರೆಯುವ ಅಡಿಕೆಗಳನ್ನೆ ಉಪಯೋಗಿಸುವುದು ಉತ್ತಮ.
ಅಡಿಕೆಗೆ ಭಾರತದ ಇತಿಹಾಸದಲ್ಲೇ ಉತ್ತಮ ಸ್ಥಾನವಿದೆ. ಎಲ್ಲಾ ವಿಚಾರದಲ್ಲೂ ಅಡಿಕೆ ಹೆಚ್ಚಾಗಿ ಉಪಯೋಗವಾಗುತ್ತದೆ. ಈ ಹಿನ್ನೆಲೆ ಅಡಿಕೆಗೆ ಪ್ರೋತ್ಸಾಹ ನೀಡಬಾರದು ಎಂಬುದನ್ನು ಬಿಟ್ಟು, ಆಮದು ಆಗುವ ಅಡಿಕೆಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಅಡಿಕೆ ಬೆಳೆಗಾರರು, ರೈತರು ಸೇರಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವ ಸನ್ನಿವೇಶ ಬರಬಹುದು’ ಎಂದರು.
ಪುತ್ತೂರಿನಲ್ಲಿ ಇತ್ತೀಚಿಗೆ ಮಕ್ಕಳು ಸಾವನ್ನಪ್ಪುವ ವಿಚಾರಗಳು ಹೆಚ್ಚಾಗಿ ಕಾಣುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಇದು ಪುತ್ತೂರಿನಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಸಂಭವಿಸುತ್ತಿದೆ. ಇದನ್ನು ಆರೋಗ್ಯ ಇಲಾಖೆ ಗಮನಹರಿಸಬೇಕು. ಯಾವ ಕಾರಣದಿಂದ ಈ ಕಾಯಿಲೆಗಳು ಬರುತ್ತಿದೆ. ಸಣ್ಣ ವಯಸ್ಸಿನವರಿಗು ಹೃದಯಾಘಾತ, ದೊಡ್ಡವರಿಗೂ ಹೃದಯಾಘಾತ ಸಂಭವಿಸುತ್ತಿದೆ. ಇದನ್ನು ಆರೋಗ್ಯ ಇಲಾಖೆ ತನಿಖೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕು. ಲಸಿಕೆ ತೆಗೆದುಕೊಂಡದ್ದರಿಂದ ಹೀಗಾಗುತ್ತಿದೆಯಾ ಎಂಬ ಬಗ್ಗೆ ತಿಳಿದು, ಜನರಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದರು…