ಪುತ್ತೂರು: ಅಡಿಕೆ ಬೆಳೆಗೆ ಪ್ರೋತ್ಸಾಹ ನೀಡಬಾರದು ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಅವರು ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಮುಖವಾಗಿ ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಅಡಿಕೆ ಬೆಳೆಗಾರರು ಅಡಿಕೆ ಎಲೆ ಚುಕ್ಕಿರೋಗದಿಂದ ಕಂಗಾಲಾಗಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ರೈತರಿಗೆ ಆಸರೆಯಾಗಬೇಕಿದ್ದ ಸರಕಾರ ಇಂತಹ ಹೇಳಿಕೆಗಳ ಮೂಲಕ ಜನರನ್ನು ದಿಕ್ಕುತಪ್ಪಿಸುತ್ತಿರುವುದು ಆತಂಕಕಾರಿ ಎಂದು ದಿವ್ಯಪ್ರಭಾ ಗೌಡ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರಕಾರ 2018ರ ಪ್ರಣಾಳಿಕೆಯಲ್ಲಿ ‘ರಾಜ್ಯ ಅಡಿಕೆ ಮಂಡಳಿ’ ಸ್ಥಾಪಿಸುವ ಭರವಸೆ ನೀಡಿತ್ತು. ಆ ಭರವಸೆ ಈಡೇರಿಸುವ ಮುನ್ನವೇ ಸರ್ಕಾರ ಭೂತಾನ್ ನಿಂದ 17,000 ಟನ್ ಅಡಿಕೆ ಆಮದು ಮಾಡಿಕೊಂಡಿದೆ. ಅಡಿಕೆಗೆ ಭವಿಷ್ಯವಿಲ್ಲ ಅನ್ನೋದು ಬಿಜೆಪಿ ಸಚಿವರ ವಾದ. ಹಾಗಾದರೆ ನಿಮ್ಮದೇ ಸರಕಾರ ನೇಪಾಳ/ಭೂತನ್ ನಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಏಕೆ..!?? ಎಂದು ಅವರು ಪ್ರಶ್ನಿಸಿದ್ದಾರೆ.
ಅಡಿಕೆಯನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಸ್ವದೇಶದಲ್ಲಿ ಅಡಿಕೆ ಬೆಳೆಯಬೇಡಿ ಎನ್ನುತ್ತಿರುವ ಬಿಜೆಪಿ ಸರಕಾರಕ್ಕೆ ಅಡಿಕೆ ಬೆಲೆಗಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಹೇಳಿಕೊಳ್ಳುವಂತಹ ಒಂದೂ ಸಾಧನೆ ಮಾಡದೆ ತನಗೇ ತಾನೇ ಡಬಲ್ ಇಂಜಿನ್ ಸರಕಾರ ಎಂದೆಲ್ಲ ನಾನಾ ಬಿರುದುಗಳನ್ನು ನೀಡಿಕೊಂಡು ಸಾಧನೆ ಎಂಬಂತೆ ನಡೆದುಕೊಳ್ಳುತ್ತಿರುವ ಬಿಜೆಪಿ ಸರಕಾರಕ್ಕೆ ಜನರು ತಕ್ಕ ಪಾಠ ಕಲಿಸುವ ಸಮಯ ಹತ್ತಿರವಾಗುತ್ತಿದೆ.
— Dr Divya Prabha Gowda (@DivyaprabhaINC) December 28, 2022
2/1 pic.twitter.com/2dUIjCzdJm