ಪುತ್ತೂರು: ಎಪಿಎಂಸಿ ರಸ್ತೆ ಯಲ್ಲಿರುವ ರೈಲ್ವೇ ಲೆವೆಲ್ ಕ್ರಾಸಿಂಗ್ನ ಸಮಸ್ಯೆಗೆ ಶ್ವಾಶತ ಪರಿಹಾರ ಒದಗಿಸಲು ನಿರ್ಮಾಣವಾಗುತ್ತಿರುವ ಅಂಡರ್ಪಾಸ್ ಕಾಮಗಾರಿಗೆ ಸಂಬಂಧಿಸಿ ಶನಿವಾರ ಮುಂಜಾನೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರೈಲು ಓಡಾಟ ಸ್ಥಗಿತ ಗೊಳಿಸಿ ಹಳಿ ಕೂರಿಸುವ ಕಾಮಗಾರಿ ನಡೆಯಿತು.

ಕಾಮಗಾರಿಯ ಪ್ರಯುಕ್ತ ಮಂಗಳೂರು-ಸುಬ್ರಹ್ಮಣ್ಯ ರೈಲು, ಮಂಗಳೂರು-ಬೆಂಗಳೂರು ರೈಲು ಸೇರಿದಂತೆ ನಾನಾ ಗೂಡ್ಸ್ರೈಲುಗಳ ಸೇವೆ ಯನ್ನು ಶನಿವಾರ ಅರ್ಧ ದಿನ ರದ್ದುಪಡಿಸಿ, ಸಮಯ ಮರು ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು.
ಹೊಸರಸ್ತೆಯ ನಿರ್ಮಾಣ ಈಗಾಗಲೇ ಮುಗಿದಿದ್ದು, ಪಕ್ಕದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿದೆ. ರೈಲು ಹಾದು ಹೋಗುವ ಹಳಿಯ ಅಡಿಭಾಗದಲ್ಲಿ ಅಂಡರ್ಪಾಸ್ಗಾಗಿ ಮಣ್ಣು ಅಗೆದು ವಿಶಾಲ ಮಾರ್ಗ ರಚಿಸಲಾಗಿದೆ. ಚತುಷ್ಪಥ ರಸ್ತೆಗೆ ಬೇಕಾಗುವಷ್ಟು ಅಗಲಕ್ಕೆ ಸಿವಿಲ್ ಕಾರ್ಯ ನಡೆಸಲಾಗಿದೆ.
ಮರು ಜೋಡಣೆ:
2022ರ ಮೇ 21ರಂದು ಅಂಡರ್ ಪಾಸ್ ಯೋಜನೆಗೆ ಶಿಲಾನ್ಯಾಸ ಮಾಡಲಾಗಿದ್ದು, ತಾಂತ್ರಿಕ ಕ್ರಮಗಳು ಮುಗಿದ ಬಳಿಕ ಬೆಂಗಳೂರಿನ ಶ್ರೀನಿವಾಸುಲು ರೆಡ್ಡಿ ಮಾಲಕತ್ವದ
ಎಸ್.ವಿ. ಕನ್ಸ್ಟ್ರಕ್ಷನ್ ಗುತ್ತಿಗೆದಾರ ಸಂಸ್ಥೆ ನವೆಂಬರ್ನಲ್ಲಿ ಕೆಲಸ ಆರಂಭಿ ಸಿತ್ತು. ಡಿಸೆಂಬರ್ನಲ್ಲಿ ಮೊದಲ ಹಂತದ ಹಳಿ ಮರು ಜೋಡಣೆ ಕಾಮಗಾರಿ ನಡೆ ಸಲಾಗಿದ್ದು, ಇದೀಗ ಶನಿವಾರ 2ನೇ ಹಂತ ಪೂರೈಸಲಾಗಿದೆ. ಮುಂಜಾನೆ ಮೆಗಾ ಕ್ರೇನ್ಗಳ ಸಹಾಯದಿಂದ ಹಳಿ ತೆರವು ಮಾಡಿ, ಅಗತ್ಯಕ್ಕೆ ತಕ್ಕಂತೆ ರಸ್ತೆ ಅಗಲೀಕರಣ ಮಾಡಿ ಮಧ್ಯಾಹ್ನದ ಹೊತ್ತಿಗೆ ಹಳಿ ಮರು ಜೋಡಣೆ ಮಾಡಲಾಯಿತು. ಫೆಬ್ರವರಿಯಲ್ಲಿ 3ನೇ ಮತ್ತು ಕೊನೆಯ ಹಂತದ ಕೆಲಸಕ್ಕಾಗಿ ಇದೇ ರೀತಿ ಅರ್ಧ ದಿನ ರೈಲು ಓಡಾಟ ಸ್ಥಗಿತಗೊಳಿಸಿ ಕೆಲಸ ಮಾಡ ಲಾಗುವುದು ಎಂದು ರೈಲ್ವೇಯ ಮೈಸೂರು ವಿಭಾಗದ ವಿಭಾಗೀಯ ಸೀನಿಯರ್ ಎಂಜಿನಿಯರ್ ರವಿಚಂದ್ರ ಹೇಳಿದರು.
ಶಾಸಕರ ಭೇಟಿ:
ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ನಿಸರ್ಗಪ್ರಿಯ ಅವರ ತಂಡ ಶನಿವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಂಡರ್ಪಾಸ್ ಸಂಪರ್ಕ ರಸ್ತೆಯ ಒಂದು ಭಾಗದಲ್ಲಿ ಚತುಷ್ಪಥ ನಿರ್ಮಾಣಕ್ಕೆ ಪಕ್ಕದ ಖಾಸಗಿ ಜಮೀನು ಅಡ್ಡ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗದ ಸರ್ವೇ ನಡೆಸಿ ಮುಂದಿನ ಕ್ರಮ ಜರಗಿಸಲು ಅವರು ಕಂದಾಯ ಇಲಾಖೆಗೆ ಸೂಚನೆ ನೀಡಿದರು. ಜಮೀನು ಒತ್ತುವರಿ ಸಂಬಂಧ ಪ್ರಕ್ರಿಯೆ ನಡೆಸಲಾಗುವುದು ಎಂದವರು ತಿಳಿಸಿದರು. ತಾ.ಪಂ. ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.
ಎಪಿಎಂಸಿ ರಸ್ತೆಯ ಈ ಬಹುನಿರೀಕ್ಷಿತ ಯೋಜನೆ 13 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿದೆ. ರೈಲ್ವೇ ಮತ್ತು ರಾಜ್ಯ ಸರಕಾರ ತಲಾ ಶೇ. 50 ಅನುದಾನ ಭರಿಸಿದೆ. ಮಾರ್ಚ್ ತಿಂಗಳಲ್ಲಿ ಅಂಡರ್ಪಾಸ್ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ ಎಂದು ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೆದು ಹೇಳಿದರು.



























