ಶಿವಮೊಗ್ಗ: ಹೊರವಲಯದ ಸೂಳೇಬೈಲಿನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಪೊಲೀಸರು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ದಾಳಿ ವೇಳೆ ಭೀಕರ ಕೃತ್ಯ ಬೆಳಕಿಗೆ ಬಂದಿದೆ.
ಅಕ್ರಮ ಕಸಾಯಿಖಾನೆಯಲ್ಲಿ 7 ಹಸುಗಳ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಇಂದು ಬೆಳಗಿನ ಜಾವ ತುಂಗಾನಗರ ಪೊಲೀಸರು ದಾಳಿ ಮಾಡಿದ್ದರು.
ತುಂಗಾನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಈ ದಾಳಿ ನಡೆದಿತ್ತು. ಪೊಲೀಸರ ದಾಳಿಗೂ ಮುನ್ನವೇ 7 ಹಸುಗಳ ಮಾರಣಹೋಮ ನಡೆದುಹೋಗಿದೆ. ಸೂಳೆಬೈಲಿನ ಅಜೀಜ್ ಎಂಬವರ ಮನೆ ಹಿಂಭಾಗದ ಶೆಡ್ ನಲ್ಲಿ ಮಾಂಸಕ್ಕಾಗಿ ಈ ಗೋವುಗಳ ಹತ್ಯೆ ಮಾಡಲಾಗಿದೆ. ಆದರೆ ಕಸಾಯಿಖಾನೆಯಲ್ಲಿ ಉಳಿದುಕೊಂಡಿದ್ದ ಇನ್ನೂ 10 ಹಸುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಗೋವುಗಳನ್ನು ರಕ್ಷಣೆ ಮಾಡಿ, ಗೋಶಾಲೆಗೆ ಶಿಫ್ಟ್ ಮಾಡಿದ್ದೇವೆ. ದಾಳಿ ಬೆನ್ನಲ್ಲೆ ಆರೋಪಿಗಳು ಪರಾರಿಯಾಗಿದ್ದು, ಅವರುಗಳ ಪತ್ತೆಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜೀಜ್, ಬಾಬು, ಅಬ್ದುಲ್ ಸತ್ತರ್ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ..