ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ಮುಗಿದು ಉತ್ತರಾಯಣ ಪ್ರವೇಶದ ಪುಣ್ಯಕಾಲ ಮಕರ ಸಂಕ್ರಮಣದಂದು ಬೆಳಿಗ್ಗೆ ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ಪೂಜೆ, ಅಭಿಷೇಕಗಳು, ಮಹಾಲಿಂಗೇಶ್ವರ ದೇವರಿಗೆ ರಾತ್ರಿ ಪೂಜೆ ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಪೂರ್ವಶಿಷ್ಟ ಪದ್ಧತಿಯಂತೆ ಶ್ರೀ ದೇವರಿಗೆ ಕನಕಾಭಿಷೇಕ ನೆರವೇರಿಸಲಾಗುತ್ತದೆ.
ಶ್ರೀ ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ಗಂಟೆ 7-30ರಿಂದ ಗಣಪತಿ ಹವನ, ಪೂರ್ವಾಹ್ನ ಗಂಟೆ 10-30ರಿಂದ ಅಭಿಷೇಕಗಳು ಹಾಗೂ 11-30 ಗಂಟೆಗೆ ಮಹಾಪೂಜೆ ನಡೆಯಲಿರುವುದು. ರಾತ್ರಿ ಮಹಾಲಿಂಗೇಶ್ವರ ದೇವರಿಗೆ ಪೂಜೆ ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಕನಕಾಭಿಷೇಕ ಜರುಗಲಿದೆ.
ಅರಸೊತ್ತಿಗೆಯ ಕಾಲದಲ್ಲಿ ಅರಸರೇ ಈ ಕಾರ್ಯ ನೆರವೇರಿಸುತ್ತಿದ್ದರು. ಮುಂದುವರಿದು ಆಡಳಿತ ಪ್ರಮುಖರು, ಮೊಕ್ತೇಸರರು, ಕಾರ್ಯ ನಿರ್ವಹಣಾಧಿಕಾರಿಗಳು ಓರ್ವರು ಈ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.
ಭಂಡಾರದ ವತಿಯಿಂದ ಒಂದು ದೊಡ್ಡ ಹರಿವಾಣದಲ್ಲಿ ಹೊದ್ಲು, ವೀಳ್ಯದೆಲೆ, ಅಡಿಕೆ, ಕಾಳುಮೆಣಸು, ಚಿನ್ನ ಹಾಗೂ ಬೆಳ್ಳಿಯ ತುಣಕಗಳು, ಚಾಲ್ತಿಯಲ್ಲಿರುವ ನಾಣ್ಯಗಳನ್ನು ಓರಣವಾಗಿ ಜೋಡಿಸಿ ದೇವರ ಬಲಿಯ ಕೊನೆಯ ಸುತ್ತಿನಲ್ಲಿ ಉಳ್ಳಾಲ್ತಿ ಅಮ್ಮನವರ ನಡೆಯಲ್ಲಿ ಕನಕಾಭಿಷೇಕ ನೆರವೇರಿಸಲಾಗುತ್ತದೆ.
ಪ್ರಸ್ತುತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ರವರು ಕನಕಾಭಿಷೇಕ ನೆರವೇರಿಸಲಿದ್ದಾರೆ..