ಪುತ್ತೂರು: ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಡೆಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಪುತ್ತೂರು ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಅಥವಾ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಬೇರೆ ಬೇರೆ ಕಾರ್ಯಕ್ರಮ ನಡೆಸಲು ತಾವು ಅವಕಾಶ ನೀಡುತ್ತಿದ್ದೀರಿ ಆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಅನ್ಯಮತೀಯರು ಬೇರೆ ಬೇರೆ ರೀತಿಯ ವ್ಯಾಪಾರ ವ್ಯವಹಾರ ನಡೆಸುತ್ತಿರುವುದು ಕಂಡು ಬರುತ್ತಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 2002ರ ಕಲಂ 31 (12) ರಂತೆ ದೇವಸ್ಥಾನದ ಜಮೀನು, ಕಟ್ಟಡ ಅಥವಾ ನಿವೇಶನಗಳನ್ನು ಸೇರಿದಂತೆ ಯಾವುದೇ ಸೊತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅದಲ್ಲದೆ ದೇವಸ್ಥಾನದಲ್ಲಿ ಅಥವಾ ಅದರ ಸಮೀಪದ ಪ್ರದೇಶದಲ್ಲಿ ಅನ್ಯಮತೀಯರಿಂದ ಹಿಂದೂ ದೈವ ದೇವರಿಗೆ ಅಪಮಾನ ಮಾಡಿರುವಂತದ್ದು ಮತ್ತು ಹಿಂದೂ ಭಾವನೆಗೆ ಧಕ್ಕೆ ಮಾಡಿದ ಬೇರೆ ಬೇರೆ ಘಟನೆಗಳು ಈ ಹಿಂದೆ ನಡೆದಿವೆ. ಒಂದು ವೇಳೆ ದೇವಸ್ಥಾನದ ಗದ್ದೆಯಲ್ಲಿ ಅಥವಾ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಅನ್ಯಮತೀಯರಿಗೆ ವ್ಯಾಪಾರ ಅಥವಾ ವ್ಯವಹಾರಕ್ಕೆ ಅವಕಾಶ ನೀಡಿದರೆ ಇಲ್ಲಿಯೂ ಕೂಡ ಇಂತಹ ಘಟನೆಗಳು ನಡೆಯುವ ಸಾಧ್ಯತೆಗಳಿರುತ್ತವೆ. ಆದುದರಿಂದ ತಾವು ಯಾವುದೇ ಸಂಘ ಸಂಸ್ಥೆಗಳಿಗೆ ದೇವಸ್ಥಾನ ಗದ್ದೆಯಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡುವ ಸಂದರ್ಭದಲ್ಲಿ ಅನ್ಯಮತೀಯರಿಗೆ ವ್ಯಾಪಾರ ವ್ಯವಹಾರ ನಡೆಸಲು ಅವಕಾಶ ಇಲ್ಲಾ ಎಂಬ ಕಟ್ಟು ನಿಟ್ಟಿನ ಆದೇಶ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಸಹ ಸಂಚಾಲಕರಾದ ಅಜಿತ್ ರೈ ಹೊಸಮನೆ, ಜಿಲ್ಲಾ ಸಮಿತಿ ಸದಸ್ಯರಾದ ಅಶೋಕ್ ತ್ಯಾಗರಾಜನಗರ, ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಸಂಚಾಲಕರಾದ ದಿನೇಶ್ ಪಂಜಿಗ, ತಾಲೂಕು ಸಮಿತಿ ಸದಸ್ಯರಾದ ಪುಷ್ಪರಾಜ್ ದರ್ಬೆ, ಹಿಂದೂ ಯುವ ವಾಹಿನಿ ತಾಲೂಕ್ ಪ್ರಮುಖ್ ಗೀತೇಶ್ ಅಜ್ಜಿಕಲ್ಲು, ಹಿಂದೂ ಯುವ ವಾಹಿನಿ ತಾಲೂಕ್ ಸಹ ಪ್ರಮುಖ್ ಮನೀಶ್ ಬನ್ನೂರು ಉಪಸ್ಥಿತರಿದ್ದರು..

























