ಹಾಸನ: ಗುರುವಾರ ಬೆಳ್ಳಂಬೆಳಗ್ಗೆ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ ನಡೆಸಲಾಗಿದ್ದು, ಈ ವೇಳೆ ಮೊಬೈಲ್ ಫೋನ್, ಗಾಂಜಾ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಎಎಸ್ಪಿ ತಮ್ಮಯ್ಯ, ಡಿವೈಎಸ್ಪಿ ಉದಯ್ಭಾಸ್ಕರ್ ನೇತೃತ್ವದಲ್ಲಿ 15 ಜನ ಪೊಲೀಸ್ ಅಧಿಕಾರಿಗಳು, 100ಕ್ಕೂ ಹೆಚ್ಚು ಪೊಲೀಸರು ಮುಂಜಾನೆ ದಾಳಿ ನಡೆಸಿದ್ದಾರೆ.
ಜಿಲ್ಲಾ ಕಾರಾಗೃಹದಲ್ಲಿ 328 ಪುರುಷ ವಿಚಾರಣಾಧೀನ ಖೈದಿಗಳು, 17 ಮಹಿಳಾ ವಿಚಾರಣಾಧೀನ ಖೈದಿಗಳಿದ್ದು, ಒಂದೂವರೆ ಗಂಟೆಗೂ ಹೆಚ್ಚು ಕಾಲ ಜೈಲಿನೊಳಗೆ ಶೋಧಕಾರ್ಯ ನಡೆಸಿದ್ದಾರೆ. ವಿಚಾರಣಾಧೀನ ಖೈದಿಗಳ ಕೊಠಡಿಗಳ ತಪಾಸಣೆ ವೇಳೆ 2 ಮೊಬೈಲ್, ಗಾಂಜಾ ಪ್ಯಾಕೇಟ್ಗಳು ಪತ್ತೆಯಾಗಿವೆ.
ಹಾಸನದ ರಿಂಗ್ ರಸ್ತೆಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣದ ಆರೋಪಿಗಳು ಹಾಗೂ ಚಿತ್ರದುರ್ಗದ ಕಳ್ಳತನ ಪ್ರಕರಣದ ಆರೋಪಿಗಳ ಬಳಿ ಗಾಂಜಾ ಪ್ಯಾಕೆಟ್ ಪತ್ತೆಯಾಗಿವೆ.
ಜೈಲಿನೊಳಗಿದ್ದ ವಿಚಾರಣಾಧೀನ ಖೈದಿಯೊಬ್ಬ ಯುವತಿಗೆ ಫೊನ್ ಮಾಡಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದುದಲ್ಲದೇ ಬೆದರಿಕೆ ಹಾಕುತ್ತಿದ್ದ. ಈ ವಿಚಾರವನ್ನು ಯುವತಿ ಪೊಲೀಸರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ. ಜೈಲಿನ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


























