ಪರಾಕ್ರಮ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹೆಸರಿಸದ 21 ದೊಡ್ಡ ದ್ವೀಪಗಳಿಗೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಿದ್ದಾರೆ. ವಾರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದುವರೆಗೂ ನಾಮಕರಣ ಮಾಡಲಾಗದ 21 ದೊಡ್ಡ ದ್ವೀಪಗಳಿಗೆ ಹೆಸರಿಡಲಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ನೆನಪಿಗಾಗಿ ಸರ್ಕಾರವು 2021 ರಲ್ಲಿ ಜನವರಿ 23 ಅನ್ನು ಪರಾಕ್ರಮ್ ದಿವಸ್ ಎಂದು ಘೋಷಿಸಿತ್ತು.
ಈ ಹಿನ್ನೆಲೆ ಶೌರ್ಯ ದಿನದಂದು, ಭಾರತ ಮಾತೆಯ ವೀರ ಮಕ್ಕಳ ಗೌರವಾರ್ಥ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅಂಡಮಾನ್-ನಿಕೋಬಾರ್ ದ್ವೀಪಗಳ 21 ದೊಡ್ಡ ಹೆಸರಿಲ್ಲದ ದ್ವೀಪಗಳಿಗೆ 21 ಪರಮವೀರ ಚಕ್ರ ವಿಜೇತರ ಹೆಸರನ್ನು ಇಡಲಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವೀಟ್ ಮಾಡಿದ್ದರು.
ಪ್ರಧಾನಮಂತ್ರಿ ಕಚೇರಿಯ (PMO) ಅಧಿಕೃತ ಪ್ರಕಟಣೆಯ ಪ್ರಕಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವಾರ್ಥವಾಗಿ 2018ರಲ್ಲಿ ಅಲ್ಲಿನ ರಾಸ್ ದ್ವೀಪಗಳಿಗೆ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿತ್ತು. ಸದ್ಯ ಈಗ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಾದ ನೇತಾಜಿಗೆ ಮೀಸಲಾಗಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಅಂಡಮಾನ್-ನಿಕೋಬಾರ್ ದ್ವೀಪಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಈ ಬದಲಾವಣೆ ಮಾಡಲಾಗಿತ್ತು. ನೇಲ್ ದ್ವೀಪಕ್ಕೆ ಶಾಹೀದ್ ದ್ವೀಪವೆಂದೂ, ಹ್ಯಾವ್ಲಾಕ್ ಐಸ್ಲ್ಯಾಂಡ್ಗೆ ಸ್ವರಾಜ್ ದ್ವೀಪವೆಂದೂ ಮರುನಾಮಕರಣ ಮಾಡಲಾಯಿತು. ಹೆಸರಿಸದ ಅತಿದೊಡ್ಡ ದ್ವೀಪಕ್ಕೆ ಮೊದಲ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗುವುದು, ಎರಡನೇ ದೊಡ್ಡ ಹೆಸರಿಲ್ಲದ ದ್ವೀಪಕ್ಕೆ ಎರಡನೇ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗುವುದು. ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅಂತಿಮ ತ್ಯಾಗ ಮಾಡಿದ ನಮ್ಮ ವೀರರಿಗೆ ಈ ಹಂತವು ಶಾಶ್ವತ ಗೌರವವಾಗಿದೆ ಎಂದು ಪಿಎಂಒ ತಿಳಿಸಿದೆ.
ದ್ವೀಪಗಳಿಗೆ ಹೆಸರಿಡಲಾಗುವ 21 ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ವಿವರ:
ಮೇಜರ್ ಸೋಮನಾಥ ಶರ್ಮಾ, ಕರಮ್ ಸಿಂಗ್, ಲೆಫ್ಟಿನೆಂಟ್ ರಾಮ ರಾಘೋಬ ರಾಣೆ, ನಾಯಕ್ ಜಾದುನಾಥ್ ಸಿಂಗ್, ಕಂಪನಿ ಹವಾಲ್ದಾರ್ ಮೇಜರ್ ಪಿರು ಸಿಂಗ್, ಕ್ಯಾಪ್ಟನ್ ಜಿಎಸ್ ಸಲಾರಿಯಾ, ಲೆಫ್ಟಿನೆಂಟ್ ಕರ್ನಲ್ (ಆಗಿನ ಮೇಜರ್) ಧನ್ ಸಿಂಗ್ ಥಾಪಾ, ಸುಬೇದಾರ್ ಜೋಗಿಂದರ್ ಸಿಂಗ್, ಮೇಜರ್ ಶೈತಾನ್ ಸಿಂಗ್, ಅಬ್ದುಲ್ ಹಮೀದ್, ಲೆಫ್ಟಿನೆಂಟ್ ಕರ್ನಲ್ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್, ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ, ಮೇಜರ್ ಹೋಶಿಯಾರ್ ಸಿಂಗ್, 2ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್, ನಿರ್ಮಲಜಿತ್ ಸಿಂಗ್ ಸೆಖೋನ್, ಮೇಜರ್ ರಾಮಸ್ವಾಮಿ ಪರಮೇಶ್ವರನ್, ನಾಯಬ್ ಸುಬೇದಾರ್ ಬನಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಸುಬೇದಾರ್ ಮೇಜರ್ ಸಂಜಯ್ ಕುಮಾರ್, ಮತ್ತು ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್.1947ರ ನವೆಂಬರ್ 3ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಹುತಾತ್ಮರಾದ ಮೊದಲ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಸೋಮನಾಥ್ ಶರ್ಮಾ ಅವರ ಹೆಸರನ್ನು ಅತಿದೊಡ್ಡ ದ್ವೀಪಕ್ಕೆ ಹೆಸರಿಸಲಾಗುವುದು. ಬದ್ಗಾಮ್ ಕದನದ ಸಮಯದಲ್ಲಿ ಅವರ ಶೌರ್ಯ ಮತ್ತು ತ್ಯಾಗಕ್ಕಾಗಿ ಅವರಿಗೆ ಮರಣೋತ್ತರವಾಗಿ ಪರಮವೀರ ಚಕ್ರವನ್ನು ನೀಡಲಾಯಿತು.
ಎರಡನೇ ಅತಿ ದೊಡ್ಡ ದ್ವೀಪಕ್ಕೆ ಎರಡನೇ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಸುಬೇದಾರ್ ಮತ್ತು ಕ್ಯಾಪ್ಟನ್ ಕರಮ್ ಸಿಂಗ್ ಅವರ ಹೆಸರನ್ನು ಇಡಲಾಗುತ್ತದೆ. ದೇಶದ ನಿಜ ಜೀವನದ ಹೀರೋಗಳಿಗೆ ಸೂಕ್ತ ಗೌರವವನ್ನು ನೀಡುವ ಪ್ರಧಾನ ಮಂತ್ರಿಯ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪಿಎಂಒ ಹೇಳಿದೆ..


























