ಪುತ್ತೂರು: ಚುನಾವಣೆ ಘೋಷಣೆಗಿಂತ 4-5 ತಿಂಗಳ ಹಿಂದಿನಿಂದಲೇ ಬಿಜೆಪಿ ರಾಜ್ಯಾಧ್ಯಕ್ಷರ ತವರು ಕ್ಷೇತ್ರದಲ್ಲಿ ಕಾಣಿಸಿಕೊಂಡ ಹಾಲಿ ಶಾಸಕರ ವಿರುದ್ಧದ ಧ್ವನಿ ತಣ್ಣಗಾಗದ ಹಿನ್ನೆಲೆಯಲ್ಲಿ ಪ್ರತ್ಯಸ್ತ್ರ ಪ್ರಯೋಗದ ಬಗ್ಗೆ ಚಿಂತನೆ ನಡೆದಿದೆ.
ನಾಮಪತ್ರ ಸಲ್ಲಿಕೆಗೆ ಒಂದು ವಾರ ಇದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಖಾತರಿ ಇಲ್ಲ ಎನ್ನುವ ಮಾಹಿತಿ ಇದೆ. ಹೀಗಾಗಿ ಹಾಲಿ ಶಾಸಕ ಸಂಜೀವ ಮಠಂದೂರು ಅವರು ಟಿಕೆಟ್ಗಾಗಿ ಪ್ರಯತ್ನ ನಿರತರಾಗಿದ್ದಾರೆ. ತಮ್ಮ ಪರವಾಗಿ ಇರುವ ಎಲ್ಲ ಪೂರಕ ಅಂಶಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿದ್ದು, ಎಷ್ಟರಮಟ್ಟಿಗೆ ಫಲ ಕೊಡುತ್ತದೆಂಬ ಕುತೂಹಲ ಮೂಡಿದೆ.
ಸದ್ಯ ಸಂಜೀವ ಮಠಂದೂರು ಅವರು ನಂಬಿರುವುದು ಎರಡೇ ಅಂಶಗಳನ್ನು. ಒಂದು- ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಆಪ್ತ ವಲಯದಲ್ಲಿರುವವರು ಎಂಬುದು.
ಮತ್ತೊಂದು- ಜಾತಿ ಲೆಕ್ಕಾಚಾರ. ದ.ಕ. ಜಿಲ್ಲೆಯಲ್ಲಿ ಪ್ರಮುಖ ಸಮುದಾಯವಾಗಿದ್ದು, ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಹೆಚ್ಚಿರುವ ಒಕ್ಕಲಿಗ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ತಮಗೆ ಮತ್ತೆ ಅವಕಾಶ ಸಿಗಬಹುದು ಎಂಬುದು ಮಠಂದೂರು ಅವರ ನಂಬಿಕೆ. ಆದರೆ ಈ ಅಂಶಗಳು ಕೈ ಹಿಡಿದಾವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಎರಡು ದಿನಗಳ ಹಿಂದೆ ಪುತ್ತೂರಿನ ಒಕ್ಕಲಿಗ ಮುಖಂಡರು ಆದಿಚುಂಚನಗಿರಿ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಸಂಜೀವ ಮಠಂದೂರು ಅವ ರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಗೀಡಾಗಿದೆ. ಈ ನಿಯೋಗದಲ್ಲಿ ಪ್ರಮುಖ ಪಕ್ಷಗಳ ಸದಸ್ಯರೂ ಇದ್ದರು ಎನ್ನಲಾಗಿದೆ.
ಹಿಂದುತ್ವದ ಭದ್ರಕೋಟೆ..!!
ಪುತ್ತೂರು ಕ್ಷೇತ್ರವು ಬಿಜೆಪಿ ಪಾಲಿಗೆ ಹಿಂದುತ್ವದ ಕೋಟೆ. ಇಲ್ಲಿ ಜಾತಿ ಆಧಾರಿತವಾಗಿ ಯಾರೂ ಗೆದ್ದಿಲ್ಲ. ಬಿಜೆಪಿ ಯೂ ಇದುವರೆಗೆ ಹಿಂದುತ್ವದ ಆಧಾ ರದ ಮೇಲೆಯೇ ಹೆಚ್ಚಾಗಿ ಚುನಾವಣೆ ಎದುರಿಸಿದೆ. ಆದರೆ ಇದೀಗ ಸಂಜೀವ ಮಠಂದೂರು ಅವರು ಜಾತಿ ಬಲಕ್ಕೆ ಮೊರೆ ಹೋಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿ ಯಾದಾರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಬಿಜೆಪಿ ಮತ್ತು ಸಂಘ ಪರಿವಾರದ ಒಂದು ಗುಂಪಿನ ಮಧ್ಯೆ ಶೀತಲ ಸಮರ ಮುಂದುವರಿ ದಿದ್ದು, ಇವೆಲ್ಲವೂ ಬಿಜೆಪಿಗೆ ಮುಳು ವಾದೀತೇ ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ.


























