ಪುತ್ತೂರು : ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಎ.29 ರಿಂದ ಮೇ.7ರ ವರೆಗೆ ನಡೆಯಲಿದೆ.
ಎ.29 ರಿಂದ ಮೇ.7ರ ವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವವು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಸುಮಾರು 8 ಕಿ.ಮೀ. ದೂರದಲ್ಲಿರುವ ಬೆಳ್ಳಿಪ್ಪಾಡಿ ಊರು ಇತಿಹಾಸ ಪ್ರಸಿದ್ಧವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಮತ್ತು ಶ್ರೀ ಸಕಲೇಶ್ವರ ದೇವಸ್ಥಾನಗಳಿದ್ದು ಇತರ ಧರ್ಮದೈವಗಳ ಸ್ಥಾನವು ಕೂಡಾ ಇರುತ್ತದೆ.
ಇತ್ತೀಚೆಗೆ ಊರಪರವೂರಿನ ಭಕ್ತರು ಬೆಳ್ಳಿಪ್ಪಾಡಿ ಮನೆತನದವರು ಸೇರಿ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಸಂಪೂರ್ಣ ಅಜೀರ್ಣವಾಗಿರುವ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ್ಯೋತಿಷ್ಯ ವಿದ್ವಾಂಸರ ಮೂಲಕ ಅಷ್ಟಮಂಗಲ, ಸ್ವರ್ಣಪ್ರಶ್ನೆಯನ್ನು ಇಟ್ಟು ಸುಧೀರ್ಘವಾಗಿ ಚಿಂತಿಸಲಾಗಿತ್ತು. ಇದರಲ್ಲಿ ಕಂಡು ಬಂದ ಪ್ರಕಾರ ಶ್ರೀ ದೇವಸ್ಥಾನವು ಅತೀ ಪುರಾತನ ಕಾಲದಿಂದಲೂ ಮಹಿಮಾತಿಶಯ ಪ್ರಭಾವಿಗಳಿಂದ ಋಷಿಮುನಿಗಳಿಂದ ಆರಾಧಿಸಲ್ಪಟ್ಟ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ಸಾನಿಧ್ಯವಾಗಿದ್ದ ಈ ದೇವರು ಶ್ರೀ ಮಹಾಮೃತ್ಯುಂಜಯ ಪಂಚಲಿಂಗೇಶ್ವರ ಸ್ವರೂಪಿಯಾದ ಈಶ್ಚರನೇ ಆಗಿರುತ್ತಾನೆ. ಪೂರ್ವದಲ್ಲಿ ಈ ದೇವಸ್ಥಾನ 8 ಗ್ರಾಮಗಳಿಗೆ ಸಂಬಂಧಿಸಿದ ಗ್ರಾಮ ದೇವಸ್ಥಾನ. ಸೀಮಾ ದೇವಸ್ಥಾನವೂ ಇದಾಗಿತ್ತು. ಹಿಂದೆ ಇಲ್ಲಿ ಉತ್ಸವಾದಿ ಪಾತ್ರಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ಹಾಗೆಯೇ ಶ್ರೀ ಸತ್ಯನಾರಾಯಣ ದೇವರ ಆರಾಧನೆಯೂ ಇಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಕಾರಣಾಂತರಗಳಿಂದ ಕ್ರಮೇಣ ಜಾತ್ರೆ, ಉತ್ಸವ ಇತ್ಯಾದಿಗಳು ಸ್ಥಗಿತಗೊಂಡು ಪ್ರಸ್ತುತ ನಿತ್ಯಪೂಜೆ ಮಾತ್ರ ಜರುಗುತ್ತಿದೆ.
ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಶ್ರೀ ಸಕಲೇಶ್ವರ ದೇವರ ಸಾನಿಧ್ಯವೂ ಇಂದಿಗೂ ಕೂಡಾ ಅತ್ಯಂತ ಜೀವ ಚೈತನ್ಯ ರೂಪದಲ್ಲಿ ಇರುವುದಾಗಿದೆ. ಭಕ್ತಜನರ ಸರ್ವಕಾಮನೆಗಳನ್ನು ಈಡೇರಿಸುವ ದೇವರು ಇದಾಗಿದ್ದು, ವಿವಾಹ ಸಿದ್ಧಿ, ಸಂತಾನ ಸಿದ್ಧಿಯೇ ಮೊದಲಾದ ಸರ್ವ ಕಾಮನೆಗಳನ್ನು ಪ್ರಾರ್ಥಿಸಬಹುದಾಗಿದೆ ಎಂದು ಕಂಡು ಬಂದಿರುತ್ತದೆ.
ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರ ಕಾರ್ಯಕ್ರಮವು ಈಗಾಗಲೇ ಪೂರ್ಣಗೊಂಡಿದ್ದು, ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರಿಗೆ ಅನುಜ್ಞಕಲಶ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮವು ದಿನಾಂಕ 28-03-2022ರಿಂದ 30-03-2022ರ ತನಕ ಸಂಪನ್ನಗೊಂಡಿದೆ. ಶ್ರೀ ದೇವಸ್ಥಾನದ ಅಭಿವೃದ್ಧಿಯ ಅಂಗವಾಗಿ ಈಗಾಗಲೇ ಗರ್ಭಗುಡಿಗೆ ಸಂಬಂಧಪಟ್ಟ ಮರದ ಕೆಲಸ, ನಮಸ್ಕಾರ ಮಂಟಪ ನಿರ್ಮಾಣ, ಗಣಪತಿ ಗುಡಿಯ ನಿರ್ಮಾಣ, ಸುತ್ತುಪೌಳಿಯ ನಿರ್ಮಾಣ ಹಾಗೂ ಅರ್ಚಕರ ಮನೆ ನಿರ್ಮಾಣದ ಕಾರ್ಯವು ಎಲ್ಲಾ ಊರ ಪರವೂರ ಭಕ್ತರ ಸಹಕಾರದೊಂದಿಗೆ ಭರದಿಂದ ಸಾಗುತ್ತಲಿದೆ. ಈ ಎಲ್ಲಾ ಕಾರ್ಯಗಳಗೆ ರೂಪಾಯಿ 90 ಲಕ್ಷಕ್ಕಿಂತ ಹೆಚ್ಚು ತಗಲಬಹುದೆಂದು ಅಂದಾಜಿಸಲಾಗಿದೆ.
ಅತ್ಯಂತ ಶೀಘ್ರದಲ್ಲಿ ಶ್ರೀ ದೇವಸ್ಥಾನದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ಬ್ರಹ್ಮಕಲಶೋತ್ಸವವನ್ನು ನಡೆಸುವರೇ ಒಂದು ಯೋಜನೆಯನ್ನು ರೂಪಿಸಿದ್ದು, ಎಲ್ಲಾ ಭಕ್ತರು ಈ ಪುಣ್ಯ ಮಹತ್ಕಾರ್ಯದಲ್ಲಿ ತನು-ಮನ-ಧನಗಳ ಸಹಕಾರವನ್ನಿತ್ತು ಯಶಸ್ವಿಗೊಳಸಬೇಕಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


























