ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ರಾಜ್ಯದಲ್ಲಿ ನಮ್ಮವರ ಕಳ್ಳತನ ಆಗಿದೆ. ಇಡಿ, ಐಟಿ ಎಲ್ಲವೂ ಬಿಜೆಪಿಯವರ ಕೈಯಲ್ಲಿದೆ. ಹಾಗಾಗಿ ಕಳ್ಳತನ ಆಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುಳ್ಯದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರು ಎಲ್ಲಾ ಕಡೆ ಎಟಿಎಂ ಇಟ್ಟಿದ್ದಾರೆ. ದುಡ್ಡಿನ ಮೇಲೆ ಬಿಜೆಪಿ ಚುನಾವಣೆ ನಡೆಸುತ್ತಿದೆ. ಅಲ್ಲದೇ ಮನಿ ಮತ್ತು ಮಸಲ್ ಪವರ್ ಬಳಸುತ್ತಿದ್ದಾರೆ. ರಾಜ್ಯದ ಬಜೆಟ್ನಲ್ಲಿ 3 ಲಕ್ಷ ಕೋಟಿ ಹಣ ಇದೆ. ಅದರಲ್ಲಿ 40 ಪರ್ಸೆಂಟ್ ಕಮಿಷನ್ ಹೋಗುತ್ತದೆ. ಅನೇಕ ಎಂಎಲ್ಎಗಳು ಹಾಗೂ ಅವರ ಸಂಬಂಧಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಈಗ ಅವರ ಬಗಲಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಅವರು ಮಾತನಾಡುವುದಿಲ್ಲ. ಒಂಭತ್ತು ವರ್ಷಗಳಲ್ಲಿ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು.
ಬಡವರ ಕೈಯಿಂದ ಕಿತ್ತು ಶ್ರೀಮಂತರಿಗೆ ಸೌಲಭ್ಯ ನೀಡಲಾಗುತ್ತಿದೆ. ಕಾಂಗ್ರೆಸ್ ಸ್ಥಾಪಿಸಿದ ಬೃಹತ್ ಯೋಜನೆಗಳನ್ನು ತನ್ನದೇ ಯೋಜನೆ ಎಂದು ಹೇಳುತ್ತಿರುವ ಬಿಜೆಪಿ ಒಂಬತ್ತು ವರ್ಷದಲ್ಲಿ ಮಾಡಿದ ಸಾಧನೆ ಏನು..!?? ಎಂಬುದನ್ನು ಜನರ ಮುಂದಿಡಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಒಡೆದು ಆಳುವ ನೀತಿ ಹೊರತಾಗಿ ಬಿಜೆಪಿ ಏನೂ ಮಾಡಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಹಿಳೆಯರಿಗೆ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಯ ಗ್ಯಾರಂಟಿ ಬಗ್ಗೆ ಮಾತನಾಡಿದ ಖರ್ಗೆ ಮುಂದೆ ಕಾಂಗ್ರೆಸ್ ಸರ್ಕಾರದಿಂದ ಈ ಯೋಜನೆಗಳ ವಾಗ್ದಾನ ಮಾಡಿ ಮತಯಾಚಿಸಿದರು.
ವೇದಿಕೆಯಲ್ಲಿ ಎಂಎಲ್ ಸಿ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಪ್ರಮುಖರು ಉಪಸ್ಥಿತರಿದ್ದರು.


























