ಪುತ್ತೂರು : ಕೇಂದ್ರದ ಅನುಮೋದನೆ ಜನ ಸಾಮಾನ್ಯರನ್ನು ಮರುಳುಗೊಳಿಸುವುದು ಸಾಧ್ಯವಿಲ್ಲ. ಪುತ್ತೂರಿನ ಮತದಾರರು ಈ ಬಾರಿ ಜನಪರ, ಹಿಂದುತ್ವದ ಗಟ್ಟಿ ಧ್ವನಿಯಾಗಿ ಅರುಣ್ಕುಮಾರ್
ಪುತ್ತಿಲ ಪರ ಮತ ಚಲಾಯಿಸಲು ನಿರ್ಣಯಿಸಿದ್ದಾರೆ ಎಂದು ಜಿ.ಪಂ
ಮತ್ತು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾಗಿರುವ ಬಾಲಕೃಷ್ಣ
ಬೋರ್ಕರ್ ಅವರು ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಉದ್ದಗಲಕ್ಕೂ ಸಹಸ್ರ ಮಂದಿ
ಅಭಿಮಾನಿ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಅರುಣ್
ಕುಮಾರ್ ಪುತ್ತಿಲ ಜಯಗಳಿಸುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ನಾನು ಸ್ವತಃ ಬಿಜೆಪಿಯೇ, ನಾವೆಲ್ಲರೂ ಬಿಜೆಪಿಯವರೇ, ನಾವೆಲ್ಲರು ಮೋದಿ, ಯೋಗಿ ಪರ, ದೇಶಕ್ಕಾಗಿ ಬದುಕುವವರು, ರಾಷ್ಟ್ರದಲ್ಲಿ ಜಾಗೃತಗೊಂಡಿರುವ ಹಿಂದುತ್ವಕ್ಕಾಗಿ ಸರ್ವ ಸಮರ್ಪಣಾ ಭಾವದಿಂದ ಕಾರ್ಯೋನ್ಮುಖರಾಗಬಲ್ಲ ಸಾಮರ್ಥ್ಯ ಇರುವ ತರುಣ ಜನ ನಾಯಕ ಪುತ್ತಿಲರು ನಾಳೆ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರ ಸರ್ವ ಕುಟಿಲ ಕಾರ್ಯತಂತ್ರಗಳನ್ನು
ಭಸ್ಮೀ ಭೂತವಾಗಿಸಿ, ವಿಜಯ ಸಾಧಿಸುವುದು ನಿಶ್ಚಯ ಎಂದು
ಅವರು ಹೇಳಿದರು.
ಪ್ರಭಾಕರ್ ಭಟ್ ಅವರು ತನಗೆ ಬೇಕಾದ ವ್ಯಕ್ತಿಗಳನ್ನೇ ತನಗೆ ಬೇಕಾದಂತೆ ಏರಿಸಿ ಕೂರಿಸುವ, ಇಳಿಸುವ ಚಾಣಾಕ್ಷಮತಿ, ಈ ಆಯ್ಕೆ / ಸ್ಥಾಪನೆ ಮೂಲ ತನಗೆ ಬೇಕಾದಷ್ಟು ಹಣ ಸಂಪಾದನೆ, ಹಫ್ತಾ ವಸೂಲಿ ಮಾಡುತ್ತಿರುವುದು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸಾಮಾನ್ಯ ಮತದಾರನಿಗೂ ತಿಳಿದ ವಾಸ್ತವ ಸತ್ಯ.
ಕಲ್ಲಡ್ಕ ಡಾ.ಪ್ರಭಾಕರ ಭಟ್ ರಿಗೆ ಸಲಾಂ ಹೊಡೆಯುವ ಮಂದಿಗಳು ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ, ಭಯೋತ್ಪಾದಕ ಸಂಘಟನೆಗಳಲ್ಲಿಯೂ, ವಿವಿಧ ಮಾಫಿಯಾಗಳಲ್ಲಿಯೂ ಇದ್ದಾರೆ. ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿಯೂ ಅವರದ್ದೇ, ಉಳ್ಳಾಲದ ಎಸ್ಡಿಪಿಐ ಅಭ್ಯರ್ಥಿಯೂ ಅವರದ್ದೇ ಆಯ್ಕೆಯ ನಿಯೋಜನೆ, ಇವರಿಗೆ ಉಳ್ಳಾಲದ ಶಾಸಕರೊಂದಿಗೆ ಉತ್ತಮ ಬಾಂಧವ್ಯವಿದೆ. ಯಾರು ಎಲ್ಲಿ ಗೆದ್ದರೂ ಇವರಿಗೆ ಲಾಭವೇ. ಇವರ ದಂಧೆಗೆ ಅನುಕೂಲವೇ ಆಗಿದೆ. ಹಿಂದೆ ಮಾಣಿ ಜಿ.ಪಂ ಕ್ಷೇತ್ರದಿಂದ ನನಗೆ ಎದುರಾಳಿಯಾಗಿ ಎಂ.ಎಸ್ ಮಹಮ್ಮದ್ ಕಾಂಗ್ರೆಸ್ನಿಂದ ಸ್ಪರ್ಧಿಸಿದಾಗ ಅವರಿಗೆ ರೂ.1ಲಕ್ಷ ದೇಣಿಗೆ ನೀಡಿ, ಅವರನ್ನು ಗೆಲ್ಲಿಸಿ, ಬಿಜೆಪಿಯ ನನ್ನನ್ನು ಸೋಲಿಸುವಂತೆ ಕುಟಿಲ ಕಾರ್ಯತಂತ್ರ ಹೆಣೆದರು ಎಂದು ಬೋರ್ಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದ
ವಿಜಯಕುಮಾರ್ ಸೊರಕೆ, ಮೈಸೂರು ಮಹಾರಾಣಿ ಮಹಿಳಾ
ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೊಡಿಪ್ಪಾಡಿ ನಿವಾಸಿ ಉದಯಶಂಕರ್ ಉಪಸ್ಥಿತರಿದ್ದರು.




























