‘ಅನ್ಯಾಯಿ ಕಾರ್ಯ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ..’ ಹಾಡು ಕೇಳಿದ್ದೀರಾ?. ಸದ್ಯ ಎಲ್ಲೇ ನೋಡಿದರು ಈ ಹಾಡಿನದ್ದೇ ಸೌಂಡ್. ಅತ್ತ ಫೇಸ್ಬುಕ್ ತೆರೆದರು, ಇತ್ತ ಇನ್ಸ್ಟಾ ನೋಡಿದರು, ಅಷ್ಟೇ ಏಕೆ ಟ್ವಿಟ್ಟರ್, ವಾಟ್ಸ್ಆ್ಯಪ್ ಹೀಗೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲೂ ಕನ್ನಡದ ‘ಸನ್ಯಾಸಿ’ ಜನಪದ ಹಾಡೇ ಕೇಳಿಸುತ್ತಿದೆ. ಆದರೆ ಈ ಜನಪದ ಹಾಡು ಹುಟ್ಟಿದ್ದೆಲ್ಲಿಂದ.!?? ಈ ಹಾಡು ಹಾಡಿದವರು ಯಾರು.!? ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಈ ಬಗ್ಗೆ ಕುತೂಹಲಕಾರಿಯಾದ ಮಾಹಿತಿ ಇಲ್ಲಿದೆ.

ಸಾಮಾಜಿಕ ಜಾಲತಾಣದ ಮೂಲಕ ಜನಪದ ಹಾಡಾದ ‘ಈ ಸುಂದರನ ಸನ್ಯಾಸಿ ಮಾಡಬಹುದೇ’ ಹಾಡು ಭಾರೀ ವೈರಲ್ ಆಗುತ್ತಿದೆ. ಆದರೆ ಇದನ್ನು ಹಾಡಿದವರು ಮತ್ತ್ಯಾರು ಅಲ್ಲ ಮಳವಳ್ಳಿ ಮಹದೇವಸ್ವಾಮಿ. ಇವರ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿತ್ತು. ಆದರೆ ಅಷ್ಟೊಂದು ಬೆಳಕಿಗೆ ಬಂದಿರಲಿಲ್ಲ. ಆದರೆ ಪ್ರಸ್ತುತ ಸಾಮಾಜಿಕ ಜಾಲತಾಣದ ವ್ಯಾಪ್ತಿಯಿಂದಾಗಿ ಈ ಜನಪದ ಹಾಡು ಸಖತ್ ವೈರಲ್ ಆಗುತ್ತಿದೆ. ಅದಕ್ಕೆ ರೀಲ್ಸ್ ಟಚ್ ನೀಡಿದ ಬಳಿಕವಂತೂ ವೈರಲ್ ವ್ಯಾಪ್ತಿಯ ಜೊತೆಗೆ ಟ್ರೆಂಡಿಂಗ್ನಲ್ಲಿ ಈ ಜನಪದ ಹಾಡು ಕಾಣಿಸಿಕೊಂಡಿದೆ.
ಮಳವಳ್ಳಿ ಮಹದೇವಸ್ವಾಮಿ ಹಿನ್ನಲೆ ಏನು.!??
ಮಳವಳ್ಳಿ ಮಹದೇವಸ್ವಾಮಿ ಜನಪದ ಗಾಯಕರು. ಜನಪದವೆಂದರೆ ಬಾಯಿಂದ ಬಾಯಿಗೆ ಬಂದ ಪದ್ಯ. ಸದ್ಯ ಆಧುನಿಕತೆಯ ಜೀವನ ಜಂಜಾಟದಲ್ಲಿ ಜನಪದ ಹಾಡುಗಳು ಮರೆಯಾಗುತ್ತಿವೆ. ಆದರೆ ಮಳ್ಳವಳ್ಲಿ ಮಹದೇವಸ್ವಾಮಿ ಅವರು ಜನಪದ ಹಾಡನ್ನು ಅಚ್ಚಳಿಯದಂತೆ ಉಳಿಯುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗಾಗಲೇ ಇವರು ಅನೇಕ ಜನಪದ ಹಾಡು ಹಾಡುವ ಮೂಲಕ ಅದನ್ನು ಜೀವಂತವಾಗಿರಿಸಿದ್ದಾರೆ. ಅಂದಹಾಗೆಯೇ ಇವರು ಇಂದು ನಿನ್ನೆಯಿಂದ ಜನಪದ ಹಾಡು ಹಾಡುತ್ತಾ ಬಂದವರಲ್ಲ.
ಮಹದೇವಸ್ವಾಮಿ ಅವರು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಸತ್ಯಗಾಲದಲ್ಲಿ ಜನಿಸಿದರು. ಬಳಿಕ ಅವರ ತಂದೆಯವರು ಕೃಷ್ಣಪುರಕ್ಕೆ ವಲಸೆ ಬಂದರು. ಆನಂತರ ಮಹದೇವ ಸ್ವಾಮಿ ಬೆಳೆಯುತ್ತಾ ಅವರು ಪೂರ್ವಜರ ಹಾಡುತ್ತಿದ್ದ ಜನಪದ ಹಾಡುಗಳನ್ನು ಹಾಡುತ್ತಾ ಬಂದರು. ಅಷ್ಟು ಮಾತ್ರವಲ್ಲದೆ, ಹಾಡು ರಚಿಸುತ್ತಾ, ಬಳಿಕ ಹಾಡುತ್ತಾ ಕ್ಯಾಸೆಟ್ ಕೂಡ ಬಿಡುಗಡೆ ಮಾಡಿದ್ದಾರೆ. ಸದ್ಯ ಅವರೇ ಹಾಡಿದ ‘ಅನ್ಯಾಯಿ ಕಾರ್ಯ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ’ ಹಾಡು ಮುನ್ನಲೆಗೆ ಬರುವ ಮೂಲಕ ಟ್ರೆಂಡಿಂಗ್ನಲ್ಲಿದೆ. ಆ ಮೂಲಕ ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ.


























