ಮಂಗಳೂರು : ಸುಮಾರು ಒಂದು ವರ್ಷದ ಬಳಿಕ ದ.ಕ.ಜಿಲ್ಲಾ ವ್ಯಾಪ್ತಿಯ ಸಂಘ ಪರಿವಾರ ಸಂಘಟನೆಗಳ ಸಮನ್ವಯ ಬೈಠಕ್ ಜೂ.26ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುವ ಈ ಬೈಠಕ್ನಲ್ಲಿ ಆರ್ಎಸ್ಎಸ್ನ ಪ್ರಾಂತ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಬಿಜೆಪಿ ಹಾಗೂ ಸಂಘಪರಿವಾರದ 25ಕ್ಕೂ ಅಧಿಕ ಸಂಘಟನೆಗಳ 100ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ.
ಬಿಜೆಪಿಯಿಂದ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಹಪ್ರಭಾರಿ, ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಇತರೆ ಪರಿವಾರ ಸಂಘಟನೆಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸ್ತರದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯವರೇ ಆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಹ್ವಾನಿತರಾಗಿದ್ದಾರೆ ಎನ್ನಲಾಗಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಸಮನ್ವಯ ಬೈಠಕ್ ನಡೆಯುವುದು ವಾಡಿಕೆಯಾಗಿದ್ದು, ಕಳೆದ ಒಂದು ವರ್ಷದಿಂದ ನಾನಾ ಕಾರಣಗಳಿಗೆ ಸಮನ್ವಯ ಬೈಠಕ್ ನಡೆದಿಲ್ಲ. ಈ ಬಾರಿಯ ಬೈಠಕ್ ಜಿಲ್ಲೆಯಲ್ಲಿ ಪ್ರಸಕ್ತ ನಡೆಯುತ್ತಿರುವ ರಾಜಕೀಯ ಹಾಗೂ ಸಂಘಪರಿವಾರದ ಸಂಘಟನೆಗಳ ಚಟುವಟಿಕೆ ಹಿನ್ನೆಲೆಯಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ.
ಮುಖ್ಯವಾಗಿ ಪುತ್ತೂರು ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಲ್ಲಿ ಚುನಾವಣಾ ಪೂರ್ವ ಹಾಗೂ ನಂತರ ನಡೆದ ವಿದ್ಯಮಾನಗಳು, ಅಸಮಾಧಾನ ಇತ್ಯಾದಿ ಅಂಶಗಳು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಿಂದೂ ಸಂಘಟನೆಗೆ ಎದುರಾದ ಸವಾಲು, ಅವುಗಳನ್ನು ಎದುರಿಸುವ ಬಗೆ ಇತ್ಯಾದಿ ಸಂಗತಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದ್ದು, ಗೊಂದಲ, ಸಮಸ್ಯೆಗಳ ಇತ್ಯರ್ಥಕ್ಕೆ ಬೈಠಕ್ ಸಹಕಾರಿಯಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಕೈಗೊಳ್ಳಬೇಕಾದ ತೀರ್ಮಾನ, ಸಂಘಪರಿವಾರದ ಚಟುವಟಿಕೆಗಳು ಬೈಠಕ್ನಲ್ಲಿ ಚರ್ಚೆಗೆ ಒಳಪಡಲಿದೆ ಎಂದು ಹೇಳಲಾಗಿದೆ.
ಪುತ್ತಿಲ, ಬ್ರಿಜೇಶ್ ವಿಚಾರ ಚರ್ಚೆಗೆ..!??
ಮುಖ್ಯವಾಗಿ ಪುತ್ತೂರಿನಲ್ಲಿ ಇತ್ತೀಚಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಹಿಂದೂ ಸಂಘಟಕ ಅರುಣ್ ಕುಮಾರ್ ಪುತ್ತಿಲ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ಈಗಾಗಲೇ ಅರುಣ್ ಕುಮಾರ್ ಪುತ್ತಿಲ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅವರ ಬೆಂಬಲಿಗರು ಜಾಲತಾಣಗಳಲ್ಲಿ ಹಾಗೂ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಅಭಿಯಾನವನ್ನೇ ಆರಂಭಿಸಿದ್ದಾರೆ. ಇದು ಬಿಜೆಪಿ ಹಾಗೂ ಸಂಘಪರಿವಾರಕ್ಕೆ ತಲೆನೋವಿಗೆ ಕಾರಣವಾಗಿದೆ. ಇದಕ್ಕೆ ಬೈಠಕ್ನಲ್ಲಿ ತಾರ್ಕಿತ ಅಂತ್ಯ ಹಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿಯಿಂದ ಕ್ಯಾ.ಬ್ರಿಜೇಶ್ ಚೌಟ ಈ ಬಾರಿ ದ.ಕ. ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಅವರು ಸ್ವಯಂ ಆಗಿ ಪ್ರವಾಸ ಆರಂಭಿಸಿದ್ದು, ಇತ್ತ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ನಾಲ್ಕನೇ ಬಾರಿ ಸ್ಪರ್ಧಿಸುವ ಉಮೇದಿನಲ್ಲಿ ಇದ್ದಾರೆ. ಕ್ಯಾ.ಬ್ರಿಜೇಶ್ ಚೌಟ ಅವರ ಸ್ಪರ್ಧಾಕಾಂಕ್ಷೆಯ ಹಿಂದೆ ಸಂಘಪರಿವಾರಗಳ ಒತ್ತಾಸೆ ಇದೆ ಎಂದು ಹೇಳಲಾಗಿದ್ದು, ನಳಿನ್ ಕುಮಾರ್ ಅವರಿಗೆ ಪಕ್ಷದ ವರಿಷ್ಠರ ಕೃಪೆ ಇದೆ ಎನ್ನಲಾಗುತ್ತಿದೆ. ಇದು ಗೊಂದಲಕ್ಕೆ ಒಳಗಾಗುವ ಮುನ್ನವೇ ಸಮನ್ವಯ ಬೈಠಕ್ನಲ್ಲಿ ಚರ್ಚಿಸಿ ಇತ್ಯರ್ಥಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

























