ವಿಟ್ಲ : ಆನೆಗುಂದಿ ಗುರುಸೇವಾ ಪರಿಷತ್ ವಿಟ್ಲ ವಲಯದ
ವಿಶೇಷ ಸಭೆಯು ಇತ್ತೀಚೆಗೆ ವಿಟ್ಲದ ಹೋಟೆಲ್ ಪಂಚಮಿಯ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಗಳಲ್ಲಿ ಓರ್ವರಾದ ಗುರುಸೇವಾ ಪರಿಷತ್ ಕೇಂದ್ರೀಯ ಮಂಡಳಿಯ ಅಧ್ಯಕ್ಷರಾದ ಗಣೇಶ ಆಚಾರ್ಯ ಮಾತನಾಡಿ, ಗುರುಪೀಠ ಹಾಗೂ ವಿಶ್ವಕರ್ಮ ಜನಾಂಗದ ಸಂಪರ್ಕ ಕೊಂಡಿಯೇ ಈ ಗುರುಸೇವಾ ಪರಿಷತ್, ಇದರೊಂದಿಗೆ ಸೇರಿ ಜನಪರ ಸೇವೆಗೆಯ್ಯಲು ಉತ್ತಮ ಅವಕಾಶವಿರುವುದರಿಂದ ಇದರ ಸದುಪಯೋಗವನ್ನು ಪಡೆಯಬೇಕೆಂದು ಕರೆಯಿತ್ತರು.

ಮತ್ತೊರ್ವ ಅತಿಥಿ ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರೀಯ ಮಂಡಳಿ ಇದರ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಶರ್ಮಾ ಮಾತನಾಡಿ ವಿಶ್ವಕರ್ಮರು ಸುಸಂಸ್ಕೃತರಾಗಿ ಸಮಾಜದ ಏಳಿಗೆಗೆ ದುಡಿಯಬೇಕೆಂದು ನುಡಿದರು.
ಆನೆಗುಂದಿ ಗುರು ಸೇವಾ ಪರಿಷತ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶೇಖರ ಆಚಾರ್ಯ ಮಂಗಳೂರು ಮತ್ತು ಗುರು ಸೇವಾ ಪರಿಷತ್ ಪುತ್ತೂರು ವಿಧಾನಸಭಾ ಕ್ಷೇತ್ರ ಇದರ ಅಧ್ಯಕ್ಷರಾದ ಪುರುಷೋತ್ತಮ ಆಚಾರ್ಯ ಪುತ್ತೂರು ಕಾರ್ಯಕ್ರಮಕ್ಕೆ ಶುಭಕೋರಿದರು.

ಸಭೆಯ ಅಧ್ಯಕ್ಷತೆಯನ್ನು ವಿಟ್ಲ ವಲಯದ ಅಧ್ಯಕ್ಷರಾದ ಪುರಂದರ ಆಚಾರ್ಯ ವಿಟ್ಲ ವಹಿಸಿದ್ದರು.
ಗೌರವಾಧ್ಯಕ್ಷರಾದ ಪುತ್ತೂರಾಯ ಆಚಾರ್ಯ, ಕಾರ್ಯದರ್ಶಿಯರಾದ ಹರೀಶ್ ಆಚಾರ್ಯ, ಕೋಶಾಧಿಕಾರಿ ಗಣೇಶ್ ಆಚಾರ್ಯ ವಿಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೂಡುವಳಿಕೆ ಮೊಕ್ತೇಸರರು ಹಾಗೂ ಗುರುಸೇವಾ ಪರಿಷತ್ತಿನ ಮತ್ತು ವಿಶ್ವ ಕರ್ಮ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ನೆಗಳಗುಳಿ ಸುಂದರ ಆಚಾರ್ಯ ವಿಟ್ಲ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


























