ಬೆಂಗಳೂರು : ಬಿಜೆಪಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರೊಳಗೆ ಆರೋಪ-ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾಜಿ ಸಚಿವ ರೇಣುಕಾಚಾರ್ಯ ಗುರುವಾರ ರಾಜ್ಯ ಚುನಾವಣೆಯ ನೇತೃತ್ವ ವಹಿಸಿದ್ದ ಕೆಲ ನಾಯಕರ ಹೆಸರನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ರೇಣುಕಾಚಾರ್ಯ, “ಸೋಲಿಗೆ ಬಿಜೆಪಿ ಕೆಲ ನಾಯಕರ ಉದ್ದಟತನ ಮತ್ತು ಧೋರಣೆಗಳೇ ಕಾರಣ. ನಾನು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರ ಬಗ್ಗೆ ಮಾತನಾಡುವುದಿಲ್ಲ, ಆದರೆ ಕೆಲ ನಾಯಕರಿಂದಾಗಿ ನಾನು ಮಾತ್ರವಲ್ಲ ಬಿಜೆಪಿ ರಾಜ್ಯದೆಲ್ಲೆಡೆ ಸೋಲಲು ಕಾರಣವಾಯಿತು. ನನಗೆ ಭಯ ಇಲ್ಲ, ನಿರ್ಭೀತಿ ಇಂದ ಮಾತನಾಡುತ್ತೇನೆ. ಸಮಯ ಬಂದಾಗ ಎಲ್ಲರ ಕುರಿತು ಮಾತನಾಡುತ್ತೇನೆ”ಎಂದು ಕಿಡಿ ಕಾರಿದರು.
ಚುನಾವಣೆಗೆ ನಾಲ್ಕು ದಿನ ಇರುವ ವೇಳೆ ಆನ್ಲೈನ್ ವರ್ಚುವಲ್ ಮೀಟಿಂಗ್, ಆ ಮುಖಗಳನ್ನು ನೋಡಿ ಕಾರ್ಯಕರ್ತರು ರೋಸಿ ಹೋದರು. ಅವರಿಗೆ ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲ, ಇದು ಸತ್ಯ ಹೇಳುತ್ತಿದ್ದೇನೆ ಎಂದರು.
ಸೆಲ್ಯೂಟ್ ಹೊಡೆಯುತ್ತಿದ್ದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಅವರೇನು ದೊಡ್ಡ ಹೀರೋನಾ? ಇಲ್ಲಿ ಬಂದು ಪೋಸ್ ನೀಡಿದರು ಎಂದು ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ ನೋವಿದೆ. ಇದು ರೇಣುಕಾಚಾರ್ಯನ ಮಾತಲ್ಲ, ಅನೇಕ ನಾಯಕರು, ಮಾಜಿ ಶಾಸಕರು, ಕಾರ್ಯಕರ್ತರ ನೋವಿನ ಬಗ್ಗೆ, ಪಕ್ಷದ ಒಳಗಿನ ಆಂತರಿಕ ನೋವಿನ ಬಗ್ಗೆ ಮಾತನಾಡುತ್ತಿದ್ದೇನೆ. ಬೊಮ್ಮಾಯಿ ಅವರ ಬಗ್ಗೆ ನನ್ನ ವಿರೋಧವಿಲ್ಲ. ಅವರ ಕೈಗಳನ್ನು ಕಟ್ಟಿ ಹಾಕಲಾಗಿತ್ತು ಎಂದರು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒಂದೊಂದು ಜಿಲ್ಲೆಗೆ ಮೂರು ಮೂರು ಬಾರಿ ಪ್ರವಾಸ ಮಾಡಿದರು, ಅದು ಮತಗಳಾಗಿ ಪರಿವರ್ತನೆ ಆಗಲಿಲ್ಲ. ಅವರು ರಾಜೀನಾಮೆ ಕೊಟ್ಟೆ ಎಂದು ಒಂದು ಗಂಟೆಯೊಳಗೆ ಇಲ್ಲ ಎಂದರು ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದರು.
ಕೆಲವರು ಬಿಜೆಪಿ ಕಚೇರಿ ಕಾರ್ಪರೇಟ್ ಆಫೀಸ್ ಮಾಡಿ ಕೊಂಡರು. ಸರ್ವಾಧಿಕಾರಿ ಧೋರಣೆ, ಕಾರ್ಯಕರ್ತರನ್ನು ಬೆದರಿಸುವುದನ್ನು ಬಿಡಿ ಎಂದರು.
ಬಿಜೆಪಿ ರಾಜ್ಯದ ಅಧ್ಯಕ್ಷರಿಗೆ ವಿನಂತಿ ಮಾಡುತ್ತೇನೆ ನಿಮ್ಮ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಮೋದಿಜಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವೆಲ್ಲ ಪಕ್ಷದ ನಾಯಕರು ಕಾರ್ಯಕರ್ತರನ್ನು ಜೋಡಣೆ ಮಾಡಬೇಕು.
ಚುನಾವಣೆಯ 70 ಜನ ಹೊಸ ಮುಖಗಳು ನಿಮ್ಮ ಚೇಲಾಗಳಾ..!? ಎಂದು ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಅನನುಭವಿ ಸುಧಾಕರ್ ಕೈಗೆ ಪ್ರಣಾಳಿಕೆ ಕೊಟ್ಟು ಸತ್ವ ಇಲ್ಲದಂತೆ ಮಾಡಿದ್ದು, 70 ಜನರಿಗೆ ಟಿಕೆಟ್ ತಪ್ಪಿಸಿದ್ದು, ಜೊತೆಗೆ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಅವರಂತಹ ನಾಯಕರಿಗೆ ಟಿಕೆಟ್ ಕೊಡದೇ ಇದ್ದಿದ್ದು ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಟೀಕಿಸಿದ್ದಾರೆ.
ಬಿಜೆಪಿ ಪಕ್ಷವನ್ನು ಹಗಲು ರಾತ್ರಿ ಕಟ್ಟಿದ ಹಿರಿಯರಾದ ಯಡಿಯೂರಪ್ಪ, ದಿವಂಗತ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ನವರದ್ದು ಬಹುದೊಡ್ಡ ಪಾತ್ರವಿದೆ. ಅಂಥವರನ್ನು ಚುನಾವಣಾ ಸಮಯದಲ್ಲಿ ಕಡೆಗಣಿಸಿದ್ದು ಬಿಜೆಪಿಗೆ ನಷ್ಟವಾಯಿತು ಎಂದರು.


























